ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೇಲೆ ಕಾಲಿಟ್ಟ ವ್ಯಕ್ತಿ; ವಿಡಿಯೋ ವೈರಲ್
ಬೆಳಗಾವಿ, ನವೆಂಬರ್ 16: ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೇಲೆ ಕಾಲಿಟ್ಟ ವ್ಯಕ್ತಿಯಿಂದಾಗಿ ಸೋಮವಾರ ಕೆಲಕಾಲ ಬೆಳಗಾವಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬೆಳಗಾವಿ ಹೊರವಲಯ ಪೀರನವಾಡಿ ಬಳಿ ಪ್ರತಿಷ್ಠಾಪನೆಗೊಂಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಮೇಲೆ ಹತ್ತಿದ ವ್ಯಕ್ತಿಯೊಬ್ಬ ಪ್ರತಿಮೆ ಮೇಲೆ ಕಾಲಿಟ್ಟಿದ್ದು, ಈತ ಕಾಲಿಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಪೀರನವಾಡಿ ಗ್ರಾಮದ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ನಂತರ ಜನರು ಆತನನ್ನು ಕೆಳಗಿಳಿಸಿದ್ದಾರೆ.
ಬೆಳಗಾವಿ ಪೀರನವಾಡಿದಲ್ಲಿ ರಾತ್ರೋರಾತ್ರಿ ತಲೆಎತ್ತಿದ ಸಂಗೊಳ್ಳಿ ರಾಯಣ್ಣ
ವ್ಯಕ್ತಿಯ ಈ ಕೃತ್ಯದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆತನನ್ನು ಕೆಳಗಿಳಿಸಿದ ನಂತರ ರಾಯಣ್ಣ ಮೂರ್ತಿಗೆ ಯಲ್ಲಪ್ಪ ಗಡದಾರ್ ನೇತೃತ್ವದಲ್ಲಿ ಕ್ಷೀರಾಭಿಷೇಕ ಮಾಡಲಾಯಿತು. ವೈರಲ್ ಆದ ವಿಡಿಯೋ ನೋಡಿ ಯಾರೂ ಗೊಂದಲಕ್ಕೀಡಾಗಬೇಡಿ, ತಿಳಿವಳಿಕೆಯಿಲ್ಲದ ವ್ಯಕ್ತಿಯಿಂದ ಈ ಒಂದು ಘಟನೆ ನಡೆದಿದೆ ಎಂದು ರಾಯಣ್ಣ ಅಭಿಮಾನಿಗಳ ಬಳಗ ಮನವಿ ಮಾಡಿದೆ.
ಈ ಆಗಸ್ಟ್ ನಲ್ಲಷ್ಟೇ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಬೆಳಗಾವಿ ಜಿಲ್ಲೆ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ರಾತ್ರೋರಾತ್ರಿ ತಾವು ಗುರುತಿಸಿದ ಸ್ಥಳದಲ್ಲೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ನಂತರ ಇದೇ ವಿಷಯವಾಗಿ ಎಂಇಎಸ್ ಕಾರ್ಯಕರ್ತರು ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿತ್ತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ನಡೆಸಿದ್ದರು.