ಕೊರೊನಾ ನಡುವೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ
ಬೆಳಗಾವಿ, ಜುಲೈ 1: ಕೊರೊನಾ ಸಂಕಷ್ಟದ ನಡುವೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ವಾರ್ಡ್ ಗೆ ಕರೆದುಕೊಂಡು ಹೋಗಲು ಸ್ಟ್ರೆಚರ್ ಕೂಡ ನೀಡದಿರುವ ಸಂಗತಿ ಬೆಳಕಿಗೆ ಬಂದಿದೆ.
ನಿನ್ನೆ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಕರೆದುಕೊಂಡು ಪೋಷಕರು ಬೆಳಗಾವಿ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಚಿಕಿತ್ಸೆ ನಂತರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದ್ದು, ವಾರ್ಡ್ ಗೆ ಆ ಬಾಲಕನನ್ನು ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ಬೇರೆ ಕಡೆ ಇದ್ದು, ವಾರ್ಡ್ ಕರೆದುಕೊಂಡು ಹೋಗಲು ಕನಿಷ್ಠ ಸ್ಟ್ರೆಚರ್ ವ್ಯವಸ್ಥೆಯನ್ನೂ ನೀಡಿಲ್ಲ. ಆದರೆ ಬೇರೆ ವಿಧಿ ಇಲ್ಲದೇ ಆ ಬಾಲಕನ ತಂದೆಯೇ ಬಾಲಕನನ್ನು ಎತ್ತಿಕೊಂಡು ಹೋಗಿದ್ದಾರೆ.
ಸ್ಟ್ರೆಚರ್ ಇಲ್ಲದೇ ಆಕ್ಸಿಜನ್; ಹುಬ್ಬಳ್ಳಿ ಕಿಮ್ಸ್ನಲ್ಲಿ ಮಗುವಿನ ಆಕ್ರಂದನ
ಇಬ್ಬರು, ಬಾಲಕನನ್ನು ಎತ್ತಿಕೊಂಡು ಗ್ಲೂಕೋಸ್ ಬಾಟಲ್ ಹಿಡಿದು ವಾರ್ಡ್ ಗೆ ನಡೆದುಹೋಗಿದ್ದಾರೆ. ಈ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಬೆಳಗಾವಿ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸದ್ಯಕ್ಕೆ ಕೊರೊನಾ ಸೋಂಕಿತರನ್ನು ಬಿಟ್ಟು ಬೇರೆ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿಲ್ಲ. ಆದರೆ ಜ್ವರದಿಂದ ಬಳಲುತ್ತಿರುವ ಪುಟ್ಟ ಬಾಲಕನೆಡೆಗೂ ಲಕ್ಷ್ಯ ತೋರುತ್ತಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.