ಕರ್ನಾಟಕದ ಈ ಬಿಜೆಪಿ ಮಿನಿಸ್ಟರ್ ಬಾಯಿ ಬಿಟ್ಟರೆ ವಿವಾದ ಫಿಕ್ಸ್!
ಬೆಳಗಾವಿ, ಡಿಸೆಂಬರ್.02: ಕರ್ನಾಟಕದಲ್ಲಿ ಉಪ ಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನೊಂದು ವಾರದಲ್ಲಿ ಪಕ್ಕಾ ರಿಸೆಲ್ಟ್ ಹೊರ ಬೀಳಲಿದೆ. ಮತದಾರನ ಮನಸು ಗೆಲ್ಲಲು ಅಭ್ಯರ್ಥಿಗಳು ಪಡಬಾರದ ಪಾಡು ಪಡುತ್ತಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಿರಿಯ ನಾಯಕರೆಲ್ಲ ಶ್ರಮಿಸುತ್ತಿದ್ದಾರೆ.
ಬಿಜೆಪಿಯಲ್ಲಿರುವ ಈ ಸಚಿವರು ಬಾಯಿ ಬಿಟ್ಟರೆ ಒಂದಿಲ್ಲೊಂದು ವಿವಾದಗಳು ಹುಟ್ಟುಕೊಳ್ಳುವುದು ಖಾಯಂ. ಇವತ್ತು ಬೆಳಗಾವಿಯಲ್ಲೂ ಮತ್ತದೇ ಆಯಿತು. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಅಖಾಡಕ್ಕಿಳಿದ ಹಿರಿಯ ನಾಯಕ ಈಗ ಪಕ್ಷಕ್ಕೆ ಮುಜುಗರ ತರುವಂತಾ ಹೇಳಿಕೆಯನ್ನು ನೀಡಿದ್ದಾರೆ.
ನನ್ನ ಮುಖ್ಯಮಂತ್ರಿ ಮಾಡಿದ್ದು ಇವರೇ, ಪ್ಲೀಸ್ ಇವರಿಗೆ ವೋಟ್ ಹಾಕಿ!
ಹೌದು, ಹೀಗೆ ಪಕ್ಷಕ್ಕೆ ಮುಜುಗರ ಹುಟ್ಟಿಸುವಂತಾ ಹೇಳಿಕೆ ನೀಡಿದ್ದು ಮತ್ಯಾರೂ ಅಲ್ಲ. ಒನ್ ಆಂಡ್ ಒನ್ಲಿ ಸಚಿವ ಕೆ.ಎಸ್.ಈಶ್ವರಪ್ಪ. ಒಂದು ಕಡೆ ಬಿಜೆಪಿ ಹಿಂದುತ್ವದ ಅಜೆಂಡಾ ಹೊಂದಿರುವ ಪಕ್ಷವೆಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಇದಕ್ಕೆ ಪುಷ್ಟ ನೀಡುವಂತಾ ಹೇಳಿಕೆಯನ್ನು ಈಶ್ವರಪ್ಪನವರೇ ನೀಡಿದ್ದಾರೆ.
ಹಿಂದುತ್ವ, ರಾಮರಾಜ್ಯ ಮಹಾತ್ಮರ ಕನಸು!
ಹಿಂದುತ್ವ ಹಾಗೂ ರಾಮರಾಜ್ಯದ ಕನಸು ಬಿಜೆಪಿಯದ್ದಲ್ಲ. ಅದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿ ರಾಮರಾಜ್ಯದ ಕನಸು ಕಂಡಿದ್ದರು. ರಾಮರಾಜ್ಯವಷ್ಟೇ ಅಲ್ಲದೇ ಹಿಂದುತ್ವ ಕೂಡಾ ಮಹಾತ್ಮರ ಕನಸಾಗಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂ ಈಶ್ವರಪ್ಪ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಇನ್ನು, ಪ್ರಚಾರದ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧವೂ ಈಶ್ವರಪ್ಪ ಕಿಡಿ ಕಾರಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ತಾವೊಬ್ಬ ಹೆಣ್ಣು ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಅವರ ಹೇಳಿಕೆಯಿಂದ ತಮಗೆ ಸಾಕಷ್ಟು ನೋವಾಗಿದೆ ಎಂದು ಗುಡುಗಿದ್ದಾರೆ.