ಅನರ್ಹ ಶಾಸಕರು ಮಿನಿಸ್ಟರ್ ಆಗ್ತಾರಂತೆ: ಸಚಿವ ಮಾಧುಸ್ವಾಮಿ
Recommended Video
ಬೆಳಗಾವಿ, ಸೆಪ್ಟಂಬರ್ 4: ಅನರ್ಹ ಶಾಸಕರಿಗೆ ಯಾವುದೇ ರೀತಿಯ ಅನ್ಯಾಯ ಆಗುವುದಿಲ್ಲ. ನನ್ನ ಅಂದಾಜಿನ ಪ್ರಕಾರ ಅನರ್ಹ ಶಾಸಕರು ಮಂತ್ರಿಗಳಾಗಬಹುದು ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, "ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ರಾಮ ಮಂದಿರ ವಿವಾದ ಕುರಿತು ವಿಚಾರಣೆ ನಡೆಯುತ್ತಿದೆ. ಈ ಕಾರಣದಿಂದ ಅನರ್ಹ ಶಾಸಕರ ವಿಚಾರಣೆ ವಿಳಂಭವಾಗುತ್ತಿದೆ. ನ್ಯಾಯಾಲಯಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವಂತೆ ನಾವು ಒತ್ತಡ ಹಾಕಲು ಆಗುವುದಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರಿಗೆ ನ್ಯಾಯ ಸಿಗುವ ಸಂಪೂರ್ಣ ವಿಶ್ವಾಸ ನನಗಿದೆ,'' ಎಂದರು.
ಒಂದು ವೇಳೆ ಅನರ್ಹತೆಯಾದರೂ, ಚುನಾವಣೆಗೆ ಸ್ಪರ್ಧಿಸಬಾರದು ಎಂಬ ನಿಯಮವಿಲ್ಲ. ಅನರ್ಹತೆಯನ್ನು ಸುಪ್ರೀಂ ಕೋರ್ಟ ಎತ್ತಿ ಹಿಡಿದರೂ, ಮತ್ತೆ ಚುನಾವಣೆಗೆ ಸ್ಪರ್ಧಿಸಬಹುದು. ಹೀಗಾಗಿ ನನ್ನ ಅಂದಾಜಿನ ಪ್ರಕಾರ ಅನರ್ಹ ಶಾಸಕರು ಮಂತ್ರಿಗಳಾಗಬಹುದು ಎಂದು ಹೇಳಿದರು.
ರಾಜ್ಯದಲ್ಲಿ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಸಚಿವ ಸಂಪುಟ ರಚಿಸುತ್ತಿದ್ದಂತೆ ಸಾಕಷ್ಟು ಅಸಮಾಧಾನಗಳು ಕೇಳಿ ಬಂದಿದ್ದವು. ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅನರ್ಹ ಶಾಸಕರಿಗೆ ಒಂದೆಡೆ ರಾಜಕೀಯ ಭವಿಷ್ಯದ ಚಿಂತೆ ಕಾಡುತ್ತಿದೆ. ಈ ಮದ್ಯೆ ಸಚಿವ ಮಾಧುಸ್ವಾಮಿ ಅವರ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.