ದಲಿತರ ವಿರುದ್ಧ ಅಸಂವಿಧಾನಿಕ ಪದ: ಉಮೇಶ್ ಕತ್ತಿಗೆ ಜಾಮೀನು
ಬೆಳಗಾವಿ, ಡಿಸೆಂಬರ್ 22: ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರು ದಲಿತರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ನೀಡಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಉಮೇಶ್ ಕತ್ತಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದಲಿತರ ವಿರುದ್ಧ ಅಸಂಬದ್ಧ ಹೇಳಿಕೆ: ಉಮೇಶ್ ಕತ್ತಿ ವಿರುದ್ಧ ಎಫ್ಐಆರ್
ಡಿಸೆಂಬರ್ 8ರಂದು ಜಿಲ್ಲೆಯಲ್ಲಿ ನಡೆದಿದ್ದ ಸಾರ್ವಜನಿಕರ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಭಾಷಣ ಮಾಡುತ್ತಾ ಮಾತಿನ ಭರದಲ್ಲಿ ದಲಿತರ ಕುರಿತು ಅಸಂವಿಧಾನಿಕ ಪದ ಬಳಸಿದ್ದರು.
ಈ ಬಗ್ಗೆ ದಲಿತ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ, ಅಣಕು ಶವ ಯಾತ್ರೆ, ಜಿಲ್ಲಾ ಬಂದ್ ಗಳನ್ನು ಮಾಡಿ ಉಮೇಶ್ ಕತ್ತಿ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಲು ಒತ್ತಾಯಿಸಿದ್ದರು. ಪ್ರತಿಭಟನಾಕಾರರ ಮನವಿಯಂತೆ ಉಮೇಶ್ ಕತ್ತಿ ಅವರು ಬೇಷರತ್ ಕ್ಷಮೆ ಯಾಚಿಸಿದ್ದರು.
ಉಮೇಶ್ ಕತ್ತಿ ಹೇಳಿಕೆಗೆ ವಿರೋಧ: ಚಿಕ್ಕೋಡಿ, ಹುಕ್ಕೇರಿ ಬಂದ್
ಆದರೆ ಉಮೇಶ್ ಕತ್ತಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಬಗ್ಗೆ ಡಿಸೆಂಬರ್ 15ರಂದು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಸುನೀಲ ಕಾತೇದಾರ ಎಂಬುವವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗೆ ಉಮೇಶ ಕತ್ತಿ ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಳಗಾವಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಉಮೇಶ್ ಕತ್ತಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.