ಪಂಚಭೂತಗಳಲ್ಲಿ ಸುರೇಶ ಅಂಗಡಿ ಲೀನ; ಮುಗಿಲು ಮುಟ್ಟಿದ ಹೆತ್ತ ತಾಯಿಯ ಆಕ್ರಂದನ
ಬೆಳಗಾವಿ, ಸೆಪ್ಟೆಂಬರ್ 24: ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಸುರೇಶ ಅಂಗಡಿ ಅವರ ಅಂತ್ಯಕ್ರಿಯೆ ಗುರುವಾರ ದೆಹಲಿಯಲ್ಲಿ ನೆರವೇರಿತು.
ಸಚಿವ ಸುರೇಶ ಅಂಗಡಿ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಆದರೆ ಪುತ್ರನ ಅಂತ್ಯಕ್ರಿಯೆ ಭಾಗ್ಯ ಹೆತ್ತ ತಾಯಿಗೆ ಸಿಗಲಿಲ್ಲ. ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ತಾಯಿ ಸೋಮವ್ವ, ಸುರೇಶ ಅಂಗಡಿ ಅವರ ಅಂತ್ಯಕ್ರಿಯೆ ವೀಕ್ಷಿಸಿದರು. ಈ ವೇಳೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಸುರೇಶ್ ಅಂಗಡಿ ನಿಧನ: 20ವರ್ಷದ ಹಿಂದೆ ಅದೇ ಜಾಗದಲ್ಲಿ ನಡೆದ ಘಟನೆಯ ಬಗ್ಗೆ ಡಿಕೆಶಿ ವಿವರಣೆ
ಕುಟುಂಬ ಸದಸ್ಯರು ಕೂಡ ಮೊಬೈಲ್ ನಲ್ಲಿ ಅಂತ್ಯಸಂಸ್ಕಾರ ವೀಕ್ಷಿಸಿದರು. ಸುರೇಶ ಅಂಗಡಿ ಅವರ ಮನೆಯಲ್ಲಿ ಕುಟುಂಬ ಸದಸ್ಯರ ದುಃಖ ಮಡುಗಟ್ಟಿತ್ತು. ಇದಕ್ಕೂ ಮೊದಲು ಬೆಳಗಾವಿ ವಿಶ್ವೇಶ್ವರಯ್ಯ ನಗರದ ಸುರೇಶ ಅಂಗಡಿ ಅವರ ನಿವಾಸದಲ್ಲಿ ಮಗನನ್ನು ನೆನೆದು ತಾಯಿ ಸೋಮವ್ವ ಅಂಗಡಿ ಕಣ್ಣೀರಾದರು.
ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ""ದೆಹಲಿಗೆ ಹೋಗುವಾಗ ಬಂದು ಭೇಟಿಯಾಗಿದ್ದ. ಒಂದು ತಿಂಗಳು ಬಳಿಕ ಮರಳಿ ಬರುವುದಾಗಿ ತಿಳಿಸಿದ್ದ. ಒಂದು ತಿಂಗಳವರೆಗೆ ಹೋಗಬೇಡ, ಬೇಗ ಬಾ ಮಗನೇ ಎಂದಿದ್ದೆ. ಹಳ್ಳಿಯಿಂದ ಬೆಳಗಾವಿಗೆ ಬಂದು ಶಾಲೆ ಕಲಿತು ದೊಡ್ಡ ಮನುಷ್ಯನಾಗಿದ್ದನು'' ಎಂದು ದುಃಖ ಹಂಚಿಕೊಂಡರು.
ಹುಟ್ಟೂರು ಸೇರಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾನೆ. ನನ್ನ ಮಗ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾನೆ. ಜನ ಸೇವಕನಾಗಿದ್ದ ಮಗ ಇಷ್ಟು ಬೇಗ ಬಾರದ ಲೋಕಕ್ಕೆ ಹೋಗಬಾರದಿತ್ತು ಎಂದು ನೋವು ತೋಡಿಕೊಂಡರು.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ (65) ನಿಧನಕ್ಕೆ ಗಣ್ಯರು ಕಂಬನಿಯನ್ನು ಮಿಡಿದಿದ್ದಾರೆ. ಬುಧವಾರ ರಾತ್ರಿ ಅಂಗಡಿ ಕೊನೆಯುಸಿರು ಎಳೆದಿದ್ದರು.
ಕೋವಿಡ್ 19 ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಅಂಗಡಿ ಅವರಿಗೆ ರಕ್ತದೊತ್ತಡ, ಮಧುಮೇಹ ಸಮಸ್ಯೆ ಇರಲಿಲ್ಲ, ರೋಗ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.