ಬೆಳಗಾವಿ ಉದ್ಯಮಿಗಳ ಜೊತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಸಭೆ
ಬೆಳಗಾವಿ, ಮಾರ್ಚ್ 31: ಕಾರ್ಮಿಕರ ಸಂಬಳ ಪಾವತಿಗೆ ವ್ಯವಸ್ಥೆ ಮಾಡಲು ಉದ್ಯಮಿಗಳ ಜೊತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸಮಾಲೋಚನೆ ನಡೆಸಿದರು.
ಕಾರ್ಮಿಕರಿಗೆ ಪಾಸ್ ಕೊಟ್ಟು ಸಂಬಳ ಪಾವತಿ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಒಂದು ವಾರದಲ್ಲಿ ಕಾರ್ಮಿಕರಿಗೆ ಸಂಬಳ ಕೊಡಿಸುವ ಕುರಿತು ಕೇಂದ್ರ ರೈಲು ಸಚಿವ ಸುರೇಶ್ ಅಂಗಡಿ ಉದ್ಯಮಿಗಳಿಗೆ ಮನವರಿಕೆ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಾಕ್ಡೌನ್ ವಿಸ್ತರಣೆ ವಿಚಾರ ನಾವು ಎಷ್ಟು ಕಠಿಣವಾಗಿ ಲಾಕ್ಡೌನ್ ಪಾಲಿಸುತ್ತೇವೋ ಅದರ ಮೇಲೆ ಅವಲಂಬಿತವಾಗಿದೆ.
ಲಾಕ್ಡೌನ್ ನ್ನು ಗಂಭೀರವಾಗಿ ತಗೆದುಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ದೊಡ್ಡಮಟ್ಟದ ಅನಾಹುತ ಆಗುವ ಸಂಭವವಿದೆ, ಹೀಗಾಗಿ ದಯವಿಟ್ಟು ಲಾಕ್ಡೌನ್ನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಯಾರು ಮನೆ ಬಿಟ್ಟು ಹೊರಬರಬೇಡಿ, ನಿಮಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸುತ್ತೇವೆ. ಗೂಡ್ಸ್ ರೈಲುಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಮುಂಜಾಗೃತವಾಗಿ ಹಳೆಯ ಬೋಗಿಗಳನ್ನು ಆಸ್ಪತ್ರೆಯಾಗಿ ಪರಿವರ್ತಿಸುವ ಕೆಲಸ ಮಾಡಲಾಗುತ್ತ್ತಿದೆ.
ಎಲ್ಲಾ ರೈಲ್ವೆ ವಲಯಗಳಲ್ಲಿ ಈ ಕೆಲಸ ಮಾಡಲಾಗುತ್ತೆ ಎಲ್ಲಿಯೂ ಅಗತ್ಯವಸ್ತುಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಬಂದಿಲ್ಲ. ನಿಮ್ಮ ಗಮನಕ್ಕೆ ಬಂದರೆ ತಿಳಿಸಿ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತೇವೆ ಎಂದು ಸುರೇಶ್ ಅಂಗಡಿ ಭರವಸೆ ನೀಡಿದರು.
ಆಸ್ಪತ್ರೆ ಡಾಕ್ಟರ್, ನರ್ಸ್ಗಳು, ಪೊಲೀಸ್ ಇಲಾಖೆ, ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ರಾಜ್ಯದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಇನ್ನೂ 15 ದಿನ ಅತ್ಯಂತ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಅಂತಾರಾಜ್ಯ ಕಾರ್ಮಿಕರು ಯಾರೂ ಸಹ ಗಲಾಟೆ ಮಾಡುವ ಅವಶ್ಯಕತೆ ಇಲ್ಲ, ಗೃಹ ಇಲಾಖೆ ಹಾಗೂ ಗೃಹ ಮಂತ್ರಿ ನೇರವಾದ ಡೈರೆಕ್ಷನ್ ಕೊಟ್ಟಿದ್ದಾರೆ ಎಂದರು.
ಯಾವುದೇ ರಾಜ್ಯದ ಕಾರ್ಮಿಕರಿದ್ದರೂ ಅವರನ್ನು ನೋಡಿಕೊಳ್ಳುವದು ಆಯಾ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸುರೇಶ್ ಅಂಗಡಿ ಹೇಳಿದರು. ಆಯಾ ರಾಜ್ಯ ಸರ್ಕಾರ ಕಾರ್ಮಿಕರಿಗೆ ಬೇಕಾದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.