ಐದು ವರ್ಷದ ಮಗುವಿಗೆ ರೈಲಿನಲ್ಲಿ ಔಷಧಿ ತರಿಸಿದ ಕೇಂದ್ರ ಸಚಿವ
ಬೆಳಗಾವಿ, ಏಪ್ರಿಲ್ 21: ಬೆಳಗಾವಿಯ ಐದು ವರ್ಷದ ಮಗುವಿಗೆ ಅಗತ್ಯವಿದ್ದ ಔಷಧಗಳನ್ನು ರೈಲಿನಲ್ಲಿ ತರಿಸುವ ಮೂಲಕ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಗುವಿನ ಜೀವ ಉಳಿಸಿದ್ದಾರೆ.
Recommended Video
ಲಾಕ್ ಡೌನ್ ಪರಿಣಾಮ ಔಷಧಿಯನ್ನು ತರಲಾಗದೆ ಮಗುವಿನ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದರು. ಏಪ್ರಿಲ್ 11 ರಂದು ಬೆಳಗಾವಿಯಲ್ಲಿರುವ ಸುರೇಶ್ ಅಂಗಡಿ ಅವರ ಕಚೇರಿಗೆ ಕರೆ ಮಾಡಿ, ಬೆಳಗಾವಿಯಲ್ಲಿನ 5 ವರ್ಷದ ಮಗುವಿಗೆ ಪುಣೆಯ ಡಾಕ್ಟರ್ ಚಿಕಿತ್ಸೆ ನೀಡುತ್ತಿದ್ದಾರೆ. ಮಗುವಿಗೆ ಔಷಧಗಳ ಅಗತ್ಯವಿದ್ದು, ಅದನ್ನು ಪುಣೆಯಿಂದ ತರಿಸಬೇಕಿದೆ ಎಂದಿದ್ದರು.
ಬೆಳಗಾವಿಯ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಸುರೇಶ್ ಅಂಗಡಿಯವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿ, ಪುಣೆಯಿಂದ ಬೆಳಗಾವಿಗೆ ಔಷಧ ತರಿಸಿದ್ದಾರೆ. ಬೆಳಗಾವಿಗೆ ಬಂದ ಔಷಧಿಯನ್ನು ಇಲಾಖೆಯ ಸಿಬ್ಬಂದಿಯೇ ಮಗುವಿನ ಮನೆಗೆ ತಲುಪಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಿ ಪುಣೆಯಿಂದ ಔಷಧವನ್ನು ತರಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು. ಪರಿಸ್ಥಿತಿ ಗಂಭೀರತೆ ಅರಿತ ಸಚಿವರು ಪುಣೆಯಲ್ಲಿರುವ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಗುವಿನ ಔಷಧಿಯನ್ನು ಪುಣೆ ರೈಲು ನಿಲ್ದಾಣಕ್ಕೆ ತರಲಾಯಿತು. ಬಳಿಕ ಬೆಳಗಾವಿ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಅದನ್ನು ಬೆಳಗಾವಿಗೆ ಕಳುಹಿಸಿಕೊಡಲಾಯಿತು. ಮರುದಿನ ಬೆಳಿಗ್ಗೆ ಔಷಧಿಗಳು ಬೆಳಗಾವಿಯಲ್ಲಿರುವ ನಾರೋಗ್ಯ ಪೀಡಿತ ಮಗುವಿನ ಮನೆಗೆ ತಲುಪಿತು.