ಸಿಎಂ ಹೇಳಿದ "ದೊಡ್ಡ ಹುದ್ದೆ" ಕುರಿತು ಮಾತನಾಡಿದ ಉಮೇಶ್ ಕತ್ತಿ
ಬೆಳಗಾವಿ, ಅಕ್ಟೋಬರ್ 16: ಡಿಸೆಂಬರ್ ನಲ್ಲಿ ಕತ್ತಿಗೆ ದೊಡ್ಡ ಹುದ್ದೆ ಸಿಗಲಿದೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಮಾಜಿ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ.
"ಸಿಎಂ ಹೇಳಿರುವ ದೊಡ್ಡ ಹುದ್ದೆ ಯಾವುದು ಎಂದು ಗೊತ್ತಿಲ್ಲ. ಯಡಿಯೂರಪ್ಪ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ. ರಾಜ್ಯಕ್ಕೆ ಸಿಎಂ, ಮೂರು ಜನ ಡಿಸಿಎಂ, ರಾಜ್ಯಪಾಲರು ಇದ್ದಾರೆ. ಕರ್ನಾಟಕದಲ್ಲಿ ಯಾವ ದೊಡ್ಡ ಹುದ್ದೆ ಗೊತ್ತಿಲ್ಲ. ದೊಡ್ಡ ಹುದ್ದೆ ದೇಶದ ಒಳಗೆ ಇದ್ದರೆ ಒಳ್ಳೆಯದು" ಎಂದಿದ್ದಾರೆ.
ಉಮೇಶ್ ಕತ್ತಿಗೆ ಡಿಸಿಎಂ ಸ್ಥಾನ? ಪ್ರಶ್ನೆಗೆ ಬಿಎಸ್ ವೈ ನೀಡಿದ ಉತ್ತರವೇನು?
ಇದೇ ಸಂದರ್ಭದಲ್ಲಿ, "ಉಮೇಶ ಕತ್ತಿ ಸಿಎಂ ಆಗಲಿದ್ದಾರೆ" ಎಂಬ ಕೋರೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, "ಅವಕಾಶ ಕೊಟ್ಟರೆ ನಾನು ಸಿಎಂ ಆಗೋಕೆ ರೆಡಿ. ಡಿಸೆಂಬರ್ ನಲ್ಲಿ ಬದಲಾವಣೆ ಆದರೆ ನಿಮ್ಮನ್ನು ಕರೆದುಕೊಂಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಸಿಎಂ ಆಗೋಕೆ ಹಣೆ ಬರಹದಲ್ಲಿ ಇರಬೇಕು" ಎಂದು ಹೇಳಿದರು.
ಮೋಡ ಬಿತ್ತನೆಯಲ್ಲಿ ಅವ್ಯವಹಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, "ಈ ವಿಚಾರ ನನಗೆ ಗೊತ್ತಿಲ್ಲ. ಅವ್ಯವಹಾರ ಆಗಿದ್ದರೆ ಸಿಎಂ ಉತ್ತರ ನೀಡಲಿದ್ದಾರೆ. ತನಿಖೆ ಮಾಡಿಸಲಿದ್ದಾರೆ" ಎಂದು ಹೇಳಿದರು.