ಯಡಿಯೂರಪ್ಪ ಬದಲಾದರೆ ಮುಂದಿನ ಸಿಎಂ ನಾನೇ: ಉಮೇಶ್ ಕತ್ತಿ
ಬೆಳಗಾವಿ, ಜುಲೈ 19: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಗಾಗಿ ರಾಜ್ಯ ಬಿಜೆಪಿಯಲ್ಲಿ ಗುಸುಗುಸು ನಡೆಯುತ್ತಿರುವಾಗಲೇ, ಸಿಎಂ ಬದಲಾವಣೆ ಮಾಡಿದರೆ ಮುಂದಿನ ಅಭ್ಯರ್ಥಿ ನಾನೇ ಎಂದು ಆಹಾರ ಸಚಿವ ಉಮೇಶ್ ಕತ್ತಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, "ಹುಕ್ಕೇರಿ ಮತಕ್ಷೇತ್ರದ ಜನ 8 ಬಾರಿ ಶಾಸಕನಾಗಿ ಮಾಡಿ ಆಶೀರ್ವದಿಸಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು, ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ,'' ಎಂದರು.
ಕರ್ನಾಟಕದ ಮುಖ್ಯಮಂತ್ರಿ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿ ಇವೆ. ಯಾವುದೇ ರೀತಿಯ ಕಪ್ಪುಚುಕ್ಕೆ ನನ್ನಲ್ಲಿ ಇಲ್ಲ. ಕಳಂಕ ರಹಿತ ವ್ಯಕ್ತಿತ್ವ ಇದೆ. ಅದರ ಜೊತೆಗೆ ಹುಕ್ಕೇರಿ ಜನರ ಆಶೀರ್ವಾದ ಇದೆ. ರಾಜ್ಯದ ಜನ ಆಶೀರ್ವದಿಸಿದರೆ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದರೆ ನಾನು ಸಿಎಂ ಆಗುತ್ತೇನೆ ಎಂದಿದ್ದಾರೆ.
ಸಿಎಂ ಯಡಿಯೂರಪ್ಪ ಬದಲಾವಣೆ ರಾಜಕೀಯ ವಲಯದಲ್ಲಿ ಬಹುಚರ್ಚಿತವಾಗಿದ್ದು, ಈ ವಿಚಾರವಾಗಿ ಬಿಜೆಪಿ ಪಕ್ಷ ಮನಸ್ಸು ಮಾಡಿದರೆ ಮುಂದಿನ ಸಿಎಂ ನಾನೇ ಎಂದು ಉಮೇಶ್ ಕತ್ತಿ ಹೇಳಿರುವುದು ಮತ್ತೊಂದು ಚರ್ಚೆಗೆ ಆಹ್ವಾನ ನೀಡಿದಂತಾಗಿದೆ.
"ಆದರೆ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ, ಹೀಗಾಗಿ ಅದರ ಬಗ್ಗೆ ಚರ್ಚಿಸಲ್ಲ ಎಂದು ತಿಳಿಸಿದ ಉಮೇಶ್ ಕತ್ತಿ, "ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದೇನೆ. ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ. ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ,'' ಎಂದು ಉಮೇಶ್ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
"ಸಿಎಂ ಹುದ್ದೆ ಖಾಲಿ ಆದಾಗ ಆ ಬಗ್ಗೆ ವಿಚಾರ ಮಾಡುತ್ತೇನೆ. ಈಗ ಸಿಎಂ ಸ್ಥಾನ ಬದಲಾವಣೆ ಆದರೆ ಉತ್ತರ ಕರ್ನಾಟಕಕ್ಕೆ ಕೊಡಬೇಕೆಂಬುದು ನಮ್ಮ ವಾದ. ಹೈಕಮಾಂಡ್ ನಿರ್ಣಯ ಮಾಡಿದರೆ ನಾನು ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದೇನೆ.''
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಉಮೇಶ್ ಕತ್ತಿ, "ನಳಿನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆ ಅವರು ತಮ್ಮ ಅನಿಸಿಕೆ ಹೇಳಿರಬಹುದು. ನಾನು ನಳಿನ್ ಕುಮಾರ್ ಕಟೀಲ್ ಆಡಿಯೋ ಕೇಳಿಲ್ಲ. ಕೇಳಿದ ಮೇಲೆ ಪ್ರತಿಕ್ರಿಯಿಸುತ್ತೇನೆ.
ಕಟೀಲ್ ಅವರೇ ಆಡಿಯೋ ತಮ್ಮದಲ್ಲ ಅಂದಾಗ ನಾನೇನು ಪ್ರತಿಕ್ರಿಯೆ ನೀಡಲಿ. ಆ ಆಡಿಯೋ ಯಾರು ಮಾಡಿದ್ದು ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ನೀವೇ ಮಾಡಿರಬಹುದು ಎಂದು ಉಮೇಶ್ ಕತ್ತಿ ಮಾಧ್ಯಮಗಳತ್ತ ಕೈ ತೋರಿಸಿದರು.