ಬೆಳಗಾವಿ ಲೋಕಸಭಾ ಉಪಚುನಾವಣೆ: ಕಾಂಗ್ರೆಸ್ಸಿನಿಂದ ಎರಡು ಹೆಸರು ಫೈನಲ್
ಬೆಳಗಾವಿ, ಡಿ 18: ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್, ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ತಾಲೀಮು ಬಹುತೇಕ ಮುಗಿಸಿದೆ.
ಈ ವಿಚಾರದಲ್ಲಿ ಮಾತನಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,"ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಬ್ಬರು ಹೆಸರನ್ನು ಅಂತಿಮಗೊಳಿಸಲಾಗಿದೆ"ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ: ಬಹುತೇಕ ಇವರೇ ಕಾಂಗ್ರೆಸ್ ಅಭ್ಯರ್ಥಿ!
"ಕ್ಷೇತ್ರದ ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಟಿಕೆಟ್ ಗಾಗಿ ಹಲವರು ಪ್ರಯತ್ನಿಸುತ್ತಿರುವುದಂತೂ ಹೌದು. ಇಬ್ಬರ ಹೆಸರನ್ನು ಅಂತಿಮ ಮಾಡಲಾಗಿದೆ. ಅಗತ್ಯ ಬಿದ್ದರೆ ಮತ್ತೆ ಚರ್ಚೆ ನಡೆಸುತ್ತೇವೆ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಡಿಕೆಶಿ, "ಸತೀಶ್ ಜಾರಕಿಹೊಳಿ ಈ ಭಾಗದ ಪ್ರಬಾವೀ ನಾಯಕ. ಅವರಿಗೆ ಟಿಕೆಟ್ ಕೊಡುವ ವಿಚಾರ ನೋಡೋಣ"ಎಂದು ಹೇಳಿದರೇ ಹೊರತು, ಅಂತಿಮವಾಗಿರುವ ಎರಡು ಹೆಸರು ಯಾವುದು ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಬೆಳಗಾವಿ ಲೋಕಸಭಾ ಚುನಾವಣೆ: ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕೆ
ಒಂದು ವಾರದ ಹಿಂದೆ ಬೆಂಗಳೂರಿನಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಮುಖಂಡರು, ಸತೀಶ್ ಜಾರಕಿಹೊಳಿಯನ್ನು ತಮ್ಮ ಅಭ್ಯರ್ಥಿ ಎಂದು ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿತ್ತು. ಈ ಸಭೆಯಲ್ಲಿ ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಡಾ.ಪರಮೇಶ್ವರ್, ಎಂ.ಬಿ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದ ಮುಖಂಡರು ಭಾಗವಹಿಸಿದ್ದರು.
ಆದರೆ, ಈ ವರದಿಯನ್ನು ತಳ್ಳಿಹಾಕಿದ್ದ ಸತೀಶ್ ಜಾರಕಿಹೊಳಿ, "ಸುಮ್ಮನೆ ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಗೊಂದಲ ಮೂಡಿಸಲು ನನ್ನ ಹೆಸರನ್ನು ವಿನಾಕಾರಣ ತೇಲಿ ಬಿಡಲಾಗಿದೆ"ಎಂದು ಬೇಸರ ವ್ಯಕ್ತ ಪಡಿಸಿದ್ದರು.