ಜನತಾ ಲಾಕ್ಡೌನ್ ನೆಪದಲ್ಲಿ ವ್ಯಾಪಾರಿಗಳಿಂದ ರೈತರಿಗೆ ಮೋಸ
ಬೆಳಗಾವಿ, ಏಪ್ರಿಲ್ 30: ಜನತಾ ಲಾಕ್ಡೌನ್ ಜಾರಿ ಹಿನ್ನೆಲೆ ಬೆಳಗಾವಿಯಲ್ಲಿ ರೈತರೊಂದಿಗೆ ವ್ಯಾಪಾರಿಗಳು ಚೆಲ್ಲಾಟ ನಡೆಸಿದ್ದಾರೆ. ಜನತಾ ಲಾಕ್ಡೌನ್ ನೆಪ ಮಾಡಿಕೊಂಡ ವ್ಯಾಪಾರಿಗಳು ರೈತರಿಂದ ಕಡಿಮೆ ಬೆಲೆಗೆ ಹಸಿ ಮೆಣಸಿನಕಾಯಿ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಜನತಾ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ರೈತರನ್ನು ಶೋಷಿಸುವ ಕೆಲಸ ಮತ್ತೆ ಆರಂಭವಾಗಿದೆ. ವ್ಯಾಪಾರಿಗಳು ರೈತರು ಬೆಳೆದ ಮೆಣಸಿನಕಾಯಿಯನ್ನು ಒಂದು ಚೀಲಕ್ಕೆ 80-100 ರೂ. ದರದಲ್ಲಿ ಕೊಂಡು ಮಾರ್ಕೆಟ್ನಲ್ಲಿ ಪ್ರತಿ ಕೆಜಿ ಮೆಣಸಿನಕಾಯಿಗೆ 50-60 ರೂ. ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಒಂದು ಚೀಲದಲ್ಲಿ 50ರಿಂದ 60 ಕೆಜಿ ಮೆಣಸಿನಕಾಯಿ ಇರುತ್ತಿದ್ದು, ರೈತರನ್ನು ಬೆಳಗಾವಿ ಮಾರ್ಕೆಟ್ಗೂ ಹೋಗಲು ವ್ಯಾಪಾರಿಗಳು ಬಿಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ತರಕಾರಿ ವ್ಯಾಪಾರಸ್ಥರು ಹಳ್ಳಿಗೆ ನೇರವಾಗಿ ಬಂದು ಹಸಿ ಮೆಣಸಿನಕಾಯಿ ಖರೀದಿ ಮಾಡುತ್ತಿದ್ದಾರೆ. ವ್ಯಾಪಾರಿಗಳ ಮೋಸದ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಕಾರ ಮಧ್ಯೆ ಪ್ರವೇಶಿಸಬೇಕು ಎಂದು ಖಾನಾಪುರ ತಾಲೂಕಿನ ಪೂರ್ವಭಾಗದ ರೈತರು ಆಗ್ರಹಿಸುತ್ತಿದ್ದಾರೆ.
ಖಾನಾಪುರ ತಾಲೂಕಿನ ಅವರೊಳ್ಳಿ, ಚಿಕ್ಕದಿನಕೊಪ್ಪ, ಕಗ್ಗಣಗಿ, ಕೊಡಚವಾಡ, ದೇಮಿನಕೊಪ್ಪ, ಬಿಳಕಿ, ಭಂಕಿ ಸೇರಿ 20ಕ್ಕೂ ಹಳ್ಳಿಗಳ ರೈತರು ತಾವು ಬೆಳೆದ ಮೆಣಸಿನಕಾಯಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ವಾಹನ ಓಡಾಟ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿಗಳು, ರೈತರ ಶೋಷಣೆಗೆ ಇಳಿದಿದ್ದಾರೆ ಎಂದು ದೂರುತ್ತಿದ್ದಾರೆ. ಒಟ್ಟಿನಲ್ಲಿ ಮೆಣಸಿನಕಾಯಿ ಬೆಳೆದ ರೈತರು ಈಗ ಯೋಗ್ಯ ಬೆಲೆ ಸಿಗದೇ ಕಣ್ಣೀರು ಹಾಕುತ್ತಿದ್ದಾರೆ. ಜನತಾ ಲಾಕ್ಡೌನ್ ಮೆಣಸಿನಕಾಯಿ ಬೆಳೆದ ರೈತರ ಕಣ್ಣಲ್ಲಿ ಕಣ್ಣೀರು ತರಿಸಿದೆ.