ಬೆಳಗಾವಿಯಲ್ಲಿ ಉಪಚುನಾವಣೆಗೆ ತಯಾರಿ; ಸಿದ್ದುಗೆ ದುಂಬಾಲು ಬಿದ್ದ ಟಿಕೆಟ್ ಆಕಾಂಕ್ಷಿಗಳು
ಬೆಳಗಾವಿ, ಅಕ್ಟೋಬರ್ 30: ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಉಪ ಚುನಾವಣೆಗೆ ತಯಾರಿ ಜೋರಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೇಗಾದರೂ ಮಾಡಿ ಟಿಕೆಟ್ ಗಿಟ್ಟಿಸಿಕೊಳ್ಳಬೇಕೆಂದು ಭರ್ಜರಿ ತಯಾರಿ ನಡೆಸಿದ್ದಾರೆ. ನಿನ್ನೆ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ ಮಾಜಿ ಸಿಎಂ ಸಿದ್ದರಾಮಯ್ಯರವರನ್ನು ಟಿಕೆಟ್ ಆಕಾಂಕ್ಷಿಗಳು ಒಬ್ಬೊಬ್ಬರೇ ಭೇಟಿ ಮಾಡಿ ಲಾಬಿ ಮಾಡಿದ್ದಾರೆ.
ಸರ್ಕಾರ ಕೆಡವುವುದು ದೇವೇಗೌಡರ ಕುಟುಂಬದ ಕೆಲಸ: ಸಿದ್ದರಾಮಯ್ಯ
ಅದರಲ್ಲೂ ಅಥಣಿ ಮತಕ್ಷೇತ್ರದಿಂದ ಸದಾಶಿವ ಬುಟಾಳೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕೇಳಿದ್ದಾರೆ. ಕಳೆದ ಬಾರಿ ಟಿಕೆಟ್ ಕೈ ತಪ್ಪಿ ಹೋಗಿದ್ದು, ಈ ಬಾರಿ ಮೋಸ ಆಗದಂತೆ ನೋಡಿಕೊಳ್ಳಬೇಕೆಂದು ಬುಟಾಳೆ ದುಂಬಾಲು ಬಿದ್ದಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ 10ಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ.
ಇತ್ತ ಗೋಕಾಕ ಮತಕ್ಷೇತ್ರದಲ್ಲಿ ಈಗಾಗಲೇ ಮಾಜಿ ಸಚಿವ ಸತೀಶ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಆದರೂ ಗೋಕಾಕ್ ನಲ್ಲಿ ತನಗೆ ಟಿಕೆಟ್ ನೀಡಬೇಕೆಂದು ಬಾಲಾಜಿ ಸಾವಳಗಿ ಸಿದ್ದರಾಮಯ್ಯ ಅವರನ್ನು ಕೇಳಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯನವರು ನೋಡೋಣಾ ಎಂದಷ್ಟೇ ಹೇಳಿದ್ದಾರೆ. ಬಾಲಾಜಿ ಸಾವಳಗಿ ಈ ಹಿಂದೆಯೂ ಡಿಕೆಶಿ ಭೇಟಿ ಮಾಡಿ ಗೋಕಾಕ್ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದರು. ಸದ್ಯ ಕಾಂಗ್ರೆಸ್ ಪಕ್ಷದಿಂದ ಯಾರಿಗೂ ಟಿಕೆಟ್ ಘೋಷಣೆ ಆಗಿಲ್ಲ. ಆದರೆ ಕೆಲವರು ಸ್ವಯಂ ಘೋಷಿತ ಅಭ್ಯರ್ಥಿಗಳಾಗಿ ಗೋಕಾಕದಲ್ಲಿ ಪ್ರಚಾರ ಮಾಡುತ್ತಿದ್ದಾರೆಂದು ಲಖನ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
'ಸರ್ಕಾರದ ಉಳಿವು ನನ್ನ ಕೈಯಲ್ಲಿದೆ, ಜನರ ದುಡ್ಡು ಸುಮ್ಮನೆ ಖರ್ಚು ಮಾಡಿಸಲ್ಲ'
ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಉಪ ಚುನಾವಣೆ ಕಾವು ರಂಗೇರುತ್ತಿದೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಕೈ ಆಕಾಂಕ್ಷಿಗಳು ಸಿದ್ದರಾಮಯ್ಯ ಸೇರಿದಂತೆ ಸಿಕ್ಕ ಸಿಕ್ಕ ಕೈ ನಾಯಕರ ಬಳಿ ಲಾಬಿ ನಡೆಸಿದ್ದಾರೆ. ಅಂತಿಮವಾಗಿ ಕೈ ಹೈಕಮಾಂಡ್ ಟಿಕೆಟ್ ಯಾರಿಗೆ ನೀಡುತ್ತದೆ ಎನ್ನುವ ಬಗ್ಗೆ ಕುತೂಹಲ ಉಳಿದುಕೊಂಡಿದೆ.