ಕೃಷ್ಣಾ ನದಿ ಮಟ್ಟ ಏರಿಕೆ: ಚಿಕ್ಕೋಡಿಯ ಮೂರು ಸೇತುವೆಗಳು ಜಲಾವೃತ
ಬೆಳಗಾವಿ, ಅಕ್ಟೋಬರ್ 15: ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೃಷ್ಣಾ ನದಿಯ ಉಪ ನದಿಗಳಾದ ದೂಧ್ ಗಂಗಾ ಹಾಗೂ ವೇದಗಂಗಾ ನದಿ ನೀರಿನ ಮಟ್ಟದಲ್ಲೂ ಹೆಚ್ಚಳ ಕಂಡಿದ್ದು, ಚಿಕ್ಕೋಡಿ ಉಪವಿಭಾಗದ ಮೂರು ಸೇತುವೆಗಳು ಮುಳಗಡೆಯಾಗಿವೆ.
ಸೇತುವೆಗಳ ಮುಳುಗಡೆಯಿಂದಾಗಿ ಆರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಮಹಾರಾಷ್ಟ್ರದಲ್ಲಿ ಮಳೆ: ಕೃಷ್ಣಾ ನದಿಗೆ 65,000 ಕ್ಯೂಸೆಕ್ ನೀರು ಬಿಡುಗಡೆ
ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣ 34,000 ಕ್ಯೂಸೆಕ್ಗಿಂತ ಹೆಚ್ಚು ದಾಖಲಾಗಿದೆ. ಈ ನದಿಗೆ ಅಡ್ಡಲಾಗಿರುವ ಕಲ್ಲೋಳ - ಯಡೂರ ಸೇತುವೆ, ದೂಧ್ ಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ - ದತ್ತವಾಡ ಹಾಗೂ ವೇದಗಂಗಾಗೆ ಅಡ್ಡಲಾಗಿರುವ ಬಾರವಾಡ - ಕೊನೂರು ಸೇತುವೆಯು ಸಂಪೂರ್ಣ ಜಲಾವೃತಗೊಂಡಿವೆ. ಸೇತುವೆಗಳು ಮುಳುಗಡೆಯಾದ ಕಾರಣ ಜನರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ. ಆದರೆ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದ್ದು, ನೀರಿನ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ನದಿ ತೀರದ ಜನರು ಎಚ್ಚರಿಕೆಯಲ್ಲಿರಬೇಕೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
"ಮಹಾರಾಷ್ಟ್ರದ ಸಿಂಧನೂರು, ರತ್ನಾಗಿರಿ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಚಿಕ್ಕೋಡಿ ಭಾಗದಲ್ಲಿ ಕೃಷ್ಣಾ ನದಿ ತೀರದಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ. ಪ್ರತಿ ಗಂಟೆಗೊಮ್ಮೆ ಮಹಾರಾಷ್ಟ್ರದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.