ನೊಂದ ಮಹಿಳೆಯ ನೆರವಿಗೆ ಧಾವಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಬೆಳಗಾವಿ, ನವೆಂಬರ್.12: ಮಗುವಿನ ಚಿಕಿತ್ಸೆಗೂ ಹಣವಿಲ್ಲದೇ ಪರದಾಡುತ್ತಿದ್ದ ಮಹಿಳೆಯ ನೆರವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧಾವಿಸಿದ್ದಾರೆ. ಡೆಂಗ್ಯೂ ಪೀಡಿತ ಮಗುವಿನ ಚಿಕಿತ್ಸೆಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಹೌದು, ಪ್ರಪಂಚವನ್ನು ನೋಡದ ಪುಟ್ಟ ಕಂದನಿಗಾಗಿ ಜೀವಿಸುತ್ತಿರುವ ಹೆತ್ತವಳ ಬದುಕಿನಲ್ಲಿ ವಿಧಿ ಮತ್ತೆ ಚೆಲ್ಲಾಟವಾಡಿದೆ. ಕಂದನ ಚಿಕಿತ್ಸೆಗೂ ಹಣವಿಲ್ಲದೇ ತಾಯಿ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಇಂಥದೊಂದು ಕರುಣಾಜನಕ ಸ್ಥಿತಿಯಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ್ ನಗರದ ಗುರುವಾರಪೇಟೆ ನಿವಾಸಿ ಸುಜಾತ ಎಂಬ ಮಹಿಳೆ ನರಳುತ್ತಿದ್ದಾರೆ.
ಆಧಾರ್' ಇಲ್ಲದ್ದಕ್ಕೆ ಮಗುವನ್ನೇ ಕಳೆದುಕೊಳ್ಳುವ ಭೀತಿಯಲ್ಲಿ ತಾಯಿ!
ಕಳೆದ ಒಂದು ವಾರದಿಂದ ಡೆಂಗ್ಯೂ ಜ್ವರಕ್ಕೆ 17 ತಿಂಗಳ ಪುಟ್ಟ ಕಂದ ಸುಪ್ರಜ್ ತುತ್ತಾಗಿದ್ದಾನೆ. ಎರಡು ದಿನಗಳ ಹಿಂದಷ್ಟೇ ತಾಯಿ ಸುಜಾತ, ತನ್ನ ಮಗುವನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಿದ್ದರು. ಐಸಿಯುನಲ್ಲಿ ಎರಡು ದಿನ ಚಿಕಿತ್ಸೆ ನೀಡಿದ ವೈದ್ಯರು, ಬಿಲ್ ಕಟ್ಟದಿದ್ದರೆ ಚಿಕಿತ್ಸೆ ನೀಡುವುದಿಲ್ಲ ತಕರಾರು ತೆಗೆದಿದ್ದಾರೆ.
ಗೋಕಾಕ್ ತಹಶೀಲ್ದಾರ್ ಗೆ ಸಿಎಂ ಸೂಚನೆ:
ಮಗುವಿನ ಚಿಕಿತ್ಸೆಗೂ ಹಣವಿಲ್ಲದೇ ಪರದಾಡುತ್ತಿದ್ದ ಮಹಿಳೆ ನೆರವಿಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಧಾವಿಸಿದ್ದಾರೆ. ಸುಜಾತ ಅವರಿಗೆ ಅಗತ್ಯ ನೆರವು ನೀಡುವಂತೆ ಗೋಕಾಕ್ ತಹಶೀಲ್ದಾರ್ ಗೆ ಬಿಎಸ್ ವೈ ಸೂಚನೆ ನೀಡಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಸುಜಾತ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅದಾಗಿ ಐದು ತಿಂಗಳಿನಲ್ಲಿ ಮಹಿಳೆಗೆ ವಿಧಿ ಮತ್ತೊಂದು ಆಘಾತ ನೀಡಿತು. ಘಟಪ್ರಭಾ ನದಿಯ ನೆರೆ ಹೊಡೆತಕ್ಕೆ ಇದ್ದ ಮನೆಯನ್ನೂ ಕಳೆದುಕೊಂಡು, ತಗಡಿನ ಶೆಡ್ ನಲ್ಲಿ ಜೀವನ ಸಾಗಿಸುತ್ತಿದ್ದರು. ಪುಟ್ಟ ಕಂದನನ್ನೂ ಕೂಡಾ ಕಳೆದುಕೊಳ್ಳುವ ಭೀತಿಯಲ್ಲಿ ಕಣ್ಣೀರು ಹಾಕುತ್ತಿದ್ದ, ಸುಜಾತ ಬದುಕಿನಲ್ಲಿ ಸಿಎಂ ನೆರವಿನಿಂದ ಹೊಸ ಭರವಸೆ ಮೂಡಿದೆ.