ಕೇಂದ್ರ ಸರ್ಕಾರ ಕೃಷಿಯಲ್ಲಿ ಐತಿಹಾಸಿಕ ಬದಲಾವಣೆ ತಂದಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಳಗಾವಿ, ಅಕ್ಟೋಬರ್ 6: ಕೃಷಿಗೆ ಸಂಬಂಧಿಸಿದಂತೆ ಐತಿಹಾಸಿಕ ಬದಲಾವಣೆಯನ್ನು ಕೇಂದ್ರ ಸರ್ಕಾರ ರೈತರ ಪರವಾಗಿ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಲವು ರಾಜ್ಯಗಳಲ್ಲಿ ಮತ್ತು ಕಾಂಗ್ರೆಸ್ ಪ್ರೇರಿತ ಇಕೋ ಸಿಸ್ಟಮ್ ಇರುವ ರಾಜ್ಯಗಳಲ್ಲಿ ರೈತರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಮತ್ತು ಕಾಂಗ್ರೆಸ್ ನ ಸ್ನೇಹ ಪರ ಪಕ್ಷಗಳು ಮಾಡುತ್ತಿವೆ. ವಾಸ್ತವಿಕ ಸಂಗತಿಯನ್ನು ಸ್ಪಷ್ಟಗೊಳಿಸಲು ಈ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ ಎಂದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಯ್ದೆ ಜಾರಿಗೆ ತರಲು ಬಯಸಿದ್ದರು. ಅವರು ಶಿಪಾರಸ್ಸಿನ ಆಧಾರದ ಮೇಲೆ ನಾನು ಹೇಳುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯ 21ನೇ ಶಿಫಾರಸ್ಸಿನಲ್ಲಿ ಎಪಿಎಂಸಿ ಕಾಯ್ದೆ ಬದಲಾವಣೆ ಮಾಡುತ್ತೇವೆ ಅಂತಾ ಹೇಳಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳೀದರು.
ಬೆಳಗಾವಿ: ದಿ.ಸುರೇಶ ಅಂಗಡಿ ಕುಟುಂಬಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಸಾಂತ್ವನ
ಕೃಷಿ ಕಾಯ್ದೆಯಿಂದ ನಿಮಗೇನು ತೊಂದರೆ
ಮಾತು ಮುಂದುವರೆಸಿ ರಾಹುಲ್ ಗಾಂಧಿಯವರೇ, ಕೃಷಿ ಕಾಯ್ದೆಯಿಂದ ನಿಮಗೇನು ತೊಂದರೆ? ನೀವು ನಿಮ್ಮ ಪ್ರಣಾಳಿಕೆಯಲ್ಲಿ ಹೇಳುವುದೊಂದು, ಮಾಡುವುದೊಂದು ಮಾಡಬಹುದಾ ಎಂದು ಪ್ರಶ್ನಿಸಿದರು. ಇವತ್ತಿನವರೆಗೂ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೃಷಿ ಸಂಬಂಧಿತ ಕಾಯ್ದೆ ಕುರಿತು ಗೊಂದಲ ಎಬ್ಬಿಸುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.
ರಾಹುಲ್ ಗಾಂಧಿಗೆ ಭಯಂಕರ ಜ್ಞಾನ ಇದೆ, ನಮಗೆ ಅಷ್ಟೊಂದು ಜ್ಞಾನ ಇಲ್ಲ. ರಾಹುಲ್ ಗಾಂಧಿ ಯಾವುದಾದರೂ ಕಾನೂನು ಪುಸ್ತಕ ಓದಿ ಎಂಎಸ್ಪಿ ಯಾವ ಕಾನೂನಿನಲ್ಲಿತ್ತು ಹೇಳಲಿ. ರೈತರು ಕಮಿಷನ್ ಕೊಡುವುದಿಲ್ಲ ಅನ್ನುವುದು ನಿಮಗೇನೂ ಸಮಸ್ಯೆ. ಎಪಿಎಂಸಿಯನ್ನು ನಾವು ಬಂದ್ ಮಾಡುತ್ತಿಲ್ಲ.
ರಾಜ್ಯಸಭೆ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾದ ವರ್ತನೆ
ಲೋಕಸಭೆಯಲ್ಲಿ ಮಸೂದೆಯನ್ನು ವಿರೋಧ ಮಾಡಿದರು, ರಾಜ್ಯಸಭೆ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾದ ವರ್ತನೆ ತೋರಿದರು. ಡೆಪ್ಯೂಟಿ ಸ್ಪೀಕರ್ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವ ಪ್ರಯತ್ನ ಮಾಡಿದರು ಕೇಂದ್ರ ಸಚಿವ ಹರಿಹಾಯ್ದರು.
ಕಾಂಗ್ರೆಸ್ ಪಕ್ಷಕ್ಕೆ, ಫ್ಯಾಮಿಲಿಗೆ ಕಮಿಷನ್ ಏಜೆಂಟ್ ಬೇಕು. ರೈತರ ರಕ್ತ ಹೀರಿ ಕಮಿಷನ್ ದಲ್ಲಾಳಿ ಪರ ಕಾಂಗ್ರೆಸ್ ಇದೆ. ಕಾಂಗ್ರೆಸ್ ಪಕ್ಷ ದಲ್ಲಾಳಿಗಳ ಪಕ್ಷ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ನಮ್ಮಿಂದ ತಪ್ಪಾಗಿದೆ ಕ್ಷಮೆ ಕೊರುತ್ತೇವೆ ಅನ್ನುವ ಮಾತು ಹೇಳಿ ಇದರಿಂದ ಹೊರ ಬರಲಿ ಎಂದು ತಾಕೀತು ಮಾಡಿದರು.
ಸಾಚಾಗಳಂತೆ ಡಿ.ಕೆ ಶಿವಕುಮಾರ್ ವರ್ತಿಸಬಾರದು
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇವೆ ಅಂತಾ ಗೋವಾ ಸಿಎಂ ಹೇಳಿಕೆ ವಿಚಾರ. ಪರಿಸರ ಇಲಾಖೆಯಿಂದ ಯೋಜನೆಗೆ ಅನುಮತಿ ಬೇಕಿಲ್ಲ ಅಂತಾ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸ್ಥಳೀಯ ಜನರ ಭಾವನೆಗಳಿಗಾಗಿ ಗೋವಾ ಸಿಎಂ ಹೇಳಿರಬಹುದು ಎಂದು ತಿಳಿಸಿದರು. ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಯಾವುದೇ ದಾಳಿ ಮಾಡಲು ಎಂಟು ತಿಂಗಳಿಂದ ಸಿದ್ದತೆ ನಡೆಸಿ ದಾಳಿ ಮಾಡಲಾಗುತ್ತದೆ. ಡಿ.ಕೆ ಶಿವಕುಮಾರ್ ಶಾಸಕ ಮತ್ತು ಮಂತ್ರಿಯಾಗುವ ಮುನ್ನ ಎಷ್ಟು ಆಸ್ತಿ ಇತ್ತು? ಈಗ ಎಷ್ಟು ಆಸ್ತಿ ಇದೆ ಅಂತಾ ಅವರೇ ಬಹಿರಂಗ ಪಡಿಸಲಿ. ಸಾಚಾಗಳಂತೆ ಡಿ.ಕೆ ಶಿವಕುಮಾರ್ ವರ್ತಿಸಬಾರದು ಎಂದರು.
ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ
ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಹೇಳಿದ ಪ್ರಹ್ಲಾದ್ ಜೋಶಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಟಿಕೆಟ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿ ಕದ ತಟ್ಟಿದ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಿಂದ ಕಾಲ್ಕಿತ್ತರು.