ಪಾಕ್ ಪರ ಘೋಷಣೆ : ಬೆಳಗಾವಿಯಲ್ಲಿ ಆತಂಕಮಯ ವಾತಾವರಣ
ಬೆಳಗಾವಿ, ಜ. 6: ನಗರದಲ್ಲಿ ಭಾನುವಾರ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಕೆಲವರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ನಗರದಲ್ಲಿ ಆತಂಕಮಯ ವಾತಾವರಣ ನಿರ್ಮಿಸಿದೆ.
ನಡೆದಿದ್ದೇನು ? : ಶಾಂತವಾಗಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಇದ್ದಕ್ಕಿದ್ದಂತೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿತು. ತಕ್ಷಣ ಎಚ್ಚೆತ್ತ ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ಪೊಲೀಸರು ಲಾಠಿ ಬೀಸುತ್ತಿದ್ದಂತೆ ಮೆರವಣಿಗೆ ಚೆಲ್ಲಾಪಿಲ್ಲಿಯಾಯಿತು. ಕಾಸಿಂಸಾಬ್ ಬಾಗವಾನ (52) ಎಂಬುವರು ಲಘು ಹೃದಯಾಘಾತಕ್ಕೆ ಒಳಗಾದರು. ಅನೇಕ ಯುವಕರು ಬೈಕ್ ಬಿಟ್ಟು ಪರಾರಿಯಾದರು. ಬಡಕಲ್ ಗಲ್ಲಿಯಲ್ಲಿ 18 ಹಾಗೂ ಶಿವಾಜಿ ನಗರದಲ್ಲಿ 8 ಸೇರಿದಂತೆ ಒಟ್ಟು 26 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗ ಅವುಗಳ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಬೀದಿಗಿಳಿದ ಬಿಜೆಪಿ : ಪಾಕಿಸ್ತಾನ ಪರ ಘೋಷಣೆ ಖಂಡಿಸಿ ಸೋಮವಾರ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸಂಸದರಾದ ಪ್ರಭಾಕರ ಕೋರೆ ಹಾಗೂ ಸುರೇಶ ಅಂಗಡಿ ನೇತೃತ್ವದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹಿ ಕೃತ್ಯ ನಡೆಸಿದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಸುಮಾರು ಒಂದೂವರೆ ಗಂಟೆ ರಸ್ತೆ ತಡೆ ನಡೆಸಿದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಎಸ್. ರವಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ನಿಲ್ಲಿಸಲಾಯಿತು.
ಶಾಸಕರಾದ ಸಂಜಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಮುಖಂಡರು, ನಗರಸೇವಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿಗಿ ಬಂದೋಬಸ್ತ್ : ಬೆಳಗಾವಿಯ ಕೋಮು ಸೂಕ್ಷ್ಮ ಪ್ರದೇಶಗಳಾದ ಬಡ್ಕಲ್ ಗಲ್ಲಿ, ಖಂಜರ್ ಗಲ್ಲಿ, ಚಂದು ಗಲ್ಲಿ, ಶಿವಾಜಿ ನಗರ, ಆಜಂ ನಗರ, ಶಾಹು ನಗರ, ಅನಗೋಳ, ವಿಷ್ಣು ಗಲ್ಲಿ ಇನ್ನಿತರ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿದೆ.