ಚಿಕ್ಕೋಡಿ ಪ್ರತ್ಯೇಕ ಜಿಲ್ಲಾ ಹೋರಾಟಕ್ಕೆ ಮಠಾಧೀಶರ ಬಲ
ಚಿಕ್ಕೋಡಿ, ಮಾರ್ಚ್ 01: ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಹಲವು ತಿಂಗಳಿನಿಂದ ಮಾಡಲಾಗುತ್ತಿರುವ ಅವಿರತ ಹೋರಾಟಕ್ಕೆ ಈಗ ಮಠಾಧೀಶರುಗಳು ಬೆಂಬಲ ನೀಡಿದ್ದಾರೆ.
ಜಿಲ್ಲೆ ಘೋಷಣೆಯಾಗಬೇಕೆಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿ ಎದುರು ಅವಿರತ ಧರಣಿ ಸತ್ಯಾಗ್ರಹ ಮಾಡಲಾಗುತ್ತಿದ್ದು, ಧರಣಿ ಸತ್ಯಾಗ್ರಹ 25ನೇ ದಿನವಾದ ಇಂದು (ಫೆ.01) ಸುಮಾರು 25 ಕ್ಕೂ ಹೆಚ್ಚು ಮಂದಿ ಮಠಾಧೀಶರು ಪಾಲ್ಗೊಂಡಿದ್ದರು.
ಈಗಾಗಲೇ ವಿವಿಧ ಪಕ್ಷದ ರಾಜಕಾರಣಿಗಳು. ಜನಪ್ರತಿನಿಧಿಗಳು ಸೇರಿದಂತೆ ಕರವೇ, ವಕೀಲರ ಸಂಘ, ಕಲಾವಿದರ ಸಂಘ, ರೈತ ಸಂಘಗಳೂ ಸಹ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಸಾರ್ವಜನಿಕರೂ ಸಹ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ.
ಪ್ರಸ್ತುತ ಬೆಳಗಾವಿ ಜಿಲ್ಲೆಯಲ್ಲಿಯ ತಾಲ್ಲೂಕಾಗಿ ಗುರುತಿಸಿಕೊಳ್ಳುತ್ತಿರುವ ಚಿಕ್ಕೋಡಿ ಜನ ಸಾಂದ್ರತೆ ಮತ್ತು ವ್ಯಾವಹಾರಿಕವಾಗಿ ಪ್ರಮುಖ ಕೇಂದ್ರವಾಗಿದ್ದು, ಗಡಿ ಭಾಗದ ಜನರಿಗೆ ಬೆಳಗಾವಿ ಜಿಲ್ಲಾ ಕೇಂದ್ರ ಬಹಳ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಸ್ಥಾಪಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಇದೀಗ ಈ ಹೋರಾಟಕ್ಕೆ ಮಠಾಧೀಶರುಗಳು ಕೂಡ ದುಮುಕಿದ್ದು, ಹೋರಾಟಕ್ಕೆ ಇನ್ನೂ ಹೆಚ್ಚಿನ ಬಲ ಬರುವ ಸಾಧ್ಯತೆ ಇದೆ.