ಬೆಳಗಾವಿ ಉಪಚುನಾವಣೆಗೆ ಸುರೇಶ್ ಅಂಗಡಿ ಮಗಳು ಸ್ಪರ್ಧೆ?
ಬೆಳಗಾವಿ, ಡಿಸೆಂಬರ್ 26: ಕೇಂದ್ರ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರ ಮಗಳು ಶ್ರದ್ಧಾ ಶೆಟ್ಟರ್ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆಯೇ? ಹೀಗೊಂದು ಅನುಮಾನವನ್ನು ಶುಕ್ರವಾರ ಬೆಳಗಾವಿಯಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಕಾರ್ಯಕ್ರಮ ಮೂಡಿಸಿದೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಸೊಸೆಯಾಗಿರುವ ದಿ. ಸುರೇಶ್ ಅಂಗಡಿ ಅವರ ಎರಡನೆಯ ಪುತ್ರಿ ಶ್ರದ್ಧಾ ಶೆಟ್ಟರ್ ಅವರು ಇದೇ ಮೊದಲ ಬಾರಿಗೆ ಬಿಜೆಪಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಲ್ಲದೆ, ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಬೆಳಗಾವಿಯ ಎಪಿಎಂಸಿ ಆವರಣದಲ್ಲಿ ಬಿಜೆಪಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಮತ್ತು ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಶ್ರದ್ಧಾ ಅವರು ಭಾಗವಹಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಈ ಸ್ಥಾನಕ್ಕೆ ಸುರೇಶ್ ಅಂಗಡಿ ಅವರ ಪತ್ನಿ ಸೇರಿದಂತೆ ಅನೇಕರ ಹೆಸರುಗಳು ಕೇಳಿಬರುತ್ತಿವೆ. ಈ ನಡುವೆ ಶ್ರದ್ಧಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸುವ ಮೊದಲ ಹೆಜ್ಜೆಯಾಗಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಮುಂದೆ ಓದಿ.
ಅಂಗಡಿ ಕುಟುಂಬಕ್ಕೆ ಟಿಕೆಟ್?
ಸುರೇಶ್ ಅಂಗಡಿ ನಿಧನದ ಬಳಿಕ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗಾಗಿ ಟಿಕೆಟ್ ಪಡೆಯಲು ಬಿಜೆಪಿಯಲ್ಲಿ ತೀವ್ರ ಲಾಬಿ ಶುರುವಾಗಿದೆ. ಆದರೆ ಸುರೇಶ್ ಅಂಗಡಿ ಕುಟುಂಬದವರಿಗೇ ಟಿಕೆಟ್ ನೀಡಬೇಕು ಎಂಬ ಒತ್ತಾಯ ಒಂದು ಕಡೆಯಿಂದ ಕೇಳಿಬಂದಿದೆ. ಇದುವರೆಗೂ ಸುರೇಶ್ ಅಂಗಡಿ ಕುಟುಂಬದವರು ಬಿಜೆಪಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.
ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹ
ಈಗ ಶ್ರದ್ಧಾ ಅವರು ಸಾರ್ವಜನಿಕವಾಗಿ ಬಿಜೆಪಿ ಸಭೆಯಲ್ಲಿ ಕಾಣಿಸಿಕೊಂಡಿರುವುದು ಅವರ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಪಕ್ಷದಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಸುರೇಶ್ ಅಂಗಡಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತ್ರ ಅವರ ಕುಟುಂಬದವರು ಭಾಗವಹಿಸಿದ್ದರು. ಈಗ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಸಂಪರ್ಕ ಮುಂದುವರಿಸುತ್ತೇವೆ
'ಪಕ್ಷ ಆಯೋಜಿಸಿದ್ದ ರೈತರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಮತ್ತು ಪಕ್ಷದ ನಾಯಕರ ಜತೆ ಬೆರೆತಿದ್ದಕ್ಕೆ ಖುಷಿಯಾಗುತ್ತಿದೆ. ಕಾರ್ಯಕರ್ತರು ಮತ್ತು ಮುಖಂಡರು ಆಗಾಗ್ಗೆ ಮನೆಗೆ ಬರುತ್ತಿರುತ್ತಾರೆ. ಆ ಸಂಪರ್ಕವನ್ನು ಇನ್ನೂ ಬೆಳೆಸಿಕೊಂಡು ಹೋಗುತ್ತೇವೆ' ಎಂದು ಶ್ರದ್ಧಾ ಹೇಳಿದ್ದಾರೆ.
ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಶ್ರದ್ಧಾ
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ 'ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳಿದರು. ಸ್ಪರ್ಧೆಗೆ ಆಸಕ್ತಿ ಇದೆಯೇ? ಎದು ಕೇಳಿದಾಗ ಅವರು 'ಇಲ್ಲ ಇಲ್ಲ' ಎಂದು ಚುಟುಕಾಗಿ ಉತ್ತರ ನೀಡಿದರು.