ಕಾಂಗ್ರೆಸ್ಗೆ ಮತ: ಉಪಕಾರಸ್ಮರಣೆಯ ಮಂತ್ರ ಜಪಿಸಿದ ಮಾತೆ ಮಹಾದೇವಿ
ಬೆಳಗಾವಿ, ಮೇ 1: 'ನಮಗೆ ಉಪಕಾರ ಮಾಡಿದ ಕಾಂಗ್ರೆಸ್ಅನ್ನು ಚುನಾವಣೆಯಲ್ಲಿ ಬೆಂಬಲಿಸಿ ನಾವು ಉಪಕಾರ ಮಾಡಬೇಕು' ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಟ್ಟ ನಿರ್ಧಾರ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ರೀತಿ ನಮಗೆ ಉಪಕಾರ ಮಾಡಿದ ಅವರಿಗೆ ನಾವೂ ಉಪಕಾರ ಮಾಡಬೇಕು' ಎಂದು ಅವರು ತಿಳಿಸಿದರು.
ಜಿಲ್ಲೆಯ ನಿರ್ಮಿಸಿರುವ ಬಸವ ಮಂಟಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ನಮ್ಮ ಹಕ್ಕೋ ಅಥವಾ ಮಾತೆ ಮಹಾದೇವಿಯರದ್ದೋ?
ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಐತಿಹಾಸಿಕ ನಿರ್ಣಯವನ್ನು ನೀವು ತೆಗೆದುಕೊಳ್ಳಿ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೆವು. ಅಂದರಂತೆಯೇ ಅವರು ನಡೆದುಕೊಂಡಿದ್ದಾರೆ ಎಂದು ಮಾತೆ ಮಹಾದೇವಿ ಹೇಳಿದರು.
ಚುನಾವಣೆಯಲ್ಲಿ ಕಾಂಗ್ರೆಸ್ಅನ್ನು ಬೆಂಬಲಿಸುವಂತೆ ಹೇಳಿಕೆ ನೀಡಿದ್ದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಚಾರದಲ್ಲಿ ಮುಚ್ಚುಮರೆ ಏಕೆ. ನಾನು ಬೆಂಬಲಿಸುತ್ತೇನೆ ಎಂಬುದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಹಿಂದೊಂದು-ಮುಂದೊಂದು ಹೇಳುವುದು ನಮಗೆ ತಿಳಿದಿಲ್ಲ ಎಂದು ಹೇಳಿದರು.
ವ್ಯಾಪಕ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಬೇಡಿಕೆಯನ್ನು ಶಿಫಾರಸು ಮಾಡಿದೆ. ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಮಾನ್ಯತೆಯನ್ನೂ ನೀಡಬೇಕು ಎಂದು ಕೋರಿಕೆ ಸಲ್ಲಿಸಲಾಗಿದೆ. 900 ವರ್ಷಗಳ ಬಳಿಕ ಈ ಐತಿಹಾಸಿಕ ಕಾರ್ಯ ನಡೆದಿದೆ.
ಕಾಂಗ್ರೆಸ್ಸಿಗೆ ಮತ ಹಾಕುವಂತೆ ಮಾತೆ ಮಹಾದೇವಿ ಕರೆ
ಪಕ್ಷದ ಒಳಗಿನ ಮತ್ತು ಹೊರಗಿನವರ ವಿರೋಧಗಳನ್ನು ಲೆಕ್ಕಿಸದೆ ಸಿದ್ದರಾಮಯ್ಯ ಅವರು ದಿಟ್ಟತನದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಭಿನ್ನಮತೀಯರು ಇದ್ದರೂ ಅವರ ಧ್ವನಿ ಇಲ್ಲಿ ಕ್ಷೀಣವಾಗಿದೆ.
ಜಾತಿ ಎಂದರೆ ಕತ್ತಲು, ಧರ್ಮವೆಂದರೆ ಬೆಳಕು ಎಂಬುದನ್ನು ಮರೆಯಬಾರದು. ಲಿಂಗಾಯತವು ಜಾತಿಯಲ್ಲ. ಅದು ಧರ್ಮ ಎಂಬುದನ್ನು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ. ಈ ಸಮುದಾಯವನ್ನು ಹಿಂದೂ ಲಿಂಗಾಯತ ಎಂದು ಗುರುತಿಸುವುದು ಮಹಾಪರಾಧ ಎಂದು ತಿಳಿಸಿದರು.
ವೀರಶೈವ ಸಂಪ್ರದಾಯವಾದಿಗಳಿಗೂ ಲಿಂಗಾಯತ ಧರ್ಮ ಪಾಲಿಸುವವರಿಗೂ ಬಹಳ ವ್ಯತ್ಯಾಸಗಳಿವೆ. ಆದರೂ ಬಸವಣ್ಣನೇ ನಮ್ಮ ಗುರು, ವಚನ ಸಾಹಿತ್ಯವೇ ನಮ್ಮ ಸಂವಿಧಾನ ಎಂದು ಒಪ್ಪಿಕೊಂಡು ಬರುವವರನ್ನು ಮುಕ್ತ ಸ್ವಾಗತವಿದೆ.
ಕೆಲ ವಿರಕ್ತರು ಪಂಚಪೀಠದವರ ಜತೆ ಸೇರಿಕೊಂಡು ಸಮಾಜಕ್ಕೆ ಹಾಗೂ ಗುರುವಿಗೆ ದ್ರೋಹ ಎಸಗುತ್ತಿದ್ದಾರೆ. ವಿರಕ್ತರು ಬಸವಣ್ಣನೇ ಗುರು ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.