ಪಿಒಪಿ ಗಣೇಶ ಮೂರ್ತಿಯನ್ನೇ ಗೊಬ್ಬರವನ್ನಾಗಿ ಬದಲಿಸಿದ ಬೆಳಗಾವಿ ಯುವಕರು
ಬೆಳಗಾವಿ, ಸೆಪ್ಟೆಂಬರ್ 21: ವಿನಾಯಕ ಚೌತಿ ಬಂತೆಂದರೆ ಸಂಭ್ರಮದ ಜತೆಗೆ ಆತಂಕವೂ ಎದುರಾಗುತ್ತದೆ. ಗಣೇಶ ಮೂರ್ತಿ ವಿಸರ್ಜನೆಯ ಕಾರಣಕ್ಕೆ ಇನ್ನೆಷ್ಟು ಪ್ರಮಾಣದಲ್ಲಿ ಜೀವಜಲದ ಕಣ್ಣಿಗೆ ನಾವು ಕೈ ಹಾಕ್ತೀವೋ ಎಂಬ ಅಂಜಿಕೆ ಅದು. ಇತ್ತೀಚೆಗಂತೂ ಒಂದಿಷ್ಟು ಪರಿಸರ ಕಾಳಜಿ ಉಂಟಾಗಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗೆ ಪರ್ಯಾಯ ಹುಡುಕಲು ಆರಂಭಿಸಿದ್ದಾರೆ.
ನೀರಿಗೆ ತತ್ವಾರ ಪಡುತ್ತಿರುವ ಈ ದಿನಗಳಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ವೇಳೆ ಆಗುವ ಜಲ ಮೂಲದ ಕತ್ತು ಹಿಸುಕುವ ಅನಾಹುತವಂತೂ ಅತಿ ಮುಖ್ಯ ಆತಂಕ. ಇಂಥದೇ ಸಮಸ್ಯೆ ಬೆಳಗಾವಿಯ ನಾಗರಗಾಳಿಯ ಜನರು ಕೂಡ ಎದುರಿಸುತ್ತಿದ್ದರು. ಇಪ್ಪತ್ತೈದು ಕಿಲೋಮೀಟರ್ ದೂರದ ಬಾವಿಯೊಂದು ಇಲ್ಲಿನ ಜನರ ಪಾಲಿಗೆ ನೀರಿನ ಮೂಲವಾಗಿತ್ತು.
ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ
ಯಾವಾಗ ಅದು ಒಣಗುತ್ತಾ ಬಂದಿತೋ ಅಲ್ಲಿನ ಜನರು ಬೇರೆ ಪರ್ಯಾಯಗಳನ್ನು ಹುಡುಕತೊಡಗಿದರು. ಈ ಮಧ್ಯೆ ಹಳ್ಳಿಗರು ಗ್ರಾಮದ ಹೊರಗಿದ್ದ ಚೆಕ್ ಡ್ಯಾಮ್ ನೇ ಗಣೇಶ ಮೂರ್ತಿ ವಿಸರ್ಜನೆಗೆಂದು ಬಳಸತೊಡಗಿದರು. ಇದು ಸರಿಯಾದ ವಿಧಾನ ಅಲ್ಲ ಎಂದು ಯೋಚಿಸಿದ ಹಳ್ಳಿಯ ಯುವಕರ ತಂಡ ಅದಕ್ಕಾಗಿ ಯೋಜನೆ ರೂಪಿಸಲು ನಿರ್ಧರಿಸಿತು.
65 ಸಾವಿರ ರುಪಾಯಿ ಒಟ್ಟು ಮಾಡಿದರು
ಪುಣೆಯಲ್ಲಿ ಐಟಿ ಎಂಜಿನಿಯರ್ ಗಳಾಗಿದ್ದ ಪ್ರದೀಪ್ ದೇವನ್ ಹಾಗೂ ಅಮೃತ್ ಗೌರವ್ ಮೂವತ್ತು ಯುವಕ/ಯುವತಿಯರ ನೆರವು ಪಡೆದು, 8 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಮಾಡುವ ಸಲುವಾಗಿ 65 ಸಾವಿರ ರುಪಾಯಿ ಒಟ್ಟು ಮಾಡಿದರು. ಅದರಲ್ಲಿ ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡಲು ತೀರ್ಮಾನಿಸಿದರು.
ಇಂಟರ್ ನೆಟ್ ನಲ್ಲಿ ಸಿಕ್ಕಿತು ಪರಿಹಾರ
ಆದರೆ, ಪಿಒಪಿ ಗಣೇಶ ಮೂರ್ತಿಯನ್ನು ವಿಸರ್ಜಿಸಿದ ನೀರನ್ನು ವಿಲೇವಾರಿ ಮಾಡಲೇಬೇಕಿತ್ತಲ್ಲಾ, ಆಗ ಸಮಸ್ಯೆ ಶುರುವಾಯಿತು. ಅಂಥ ವೇಳೆಯಲ್ಲಿ ಇಂಟರ್ ನೆಟ್ ತಡಕಾಡುವಾಗ ಮುಂಬೈನ ಮಹಾನಗರ ಪಾಲಿಗೆ ಅಳವಡಿಕೊಂಡಿರುವ ಪದ್ಧತಿ ಅವರ ಕಣ್ಣರಳಿಸುವಂತೆ ಮಾಡಿತು. ಅದು ಬಹಳ ಸರಳ ಪರಿಹಾರವೂ ಆಗಿತ್ತು. ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದಲ್ಲಿ (ಎನ್ ಸಿಎಲ್) ಮಾಡಿದ ಪ್ರಯೋಗದ ಫಲಿತಾಂಶವೇ ಅದಾಗಿತ್ತು.
ನೀರಿಗೆ ಅಮೋನಿಯಂ ಬೈಕಾರ್ಬೋನೆಟ್ ಸೇರಿಸಲಾಯಿತು
ಅಂದಹಾಗೆ, ಪಿಒಪಿ ಅನ್ನು ಕ್ಯಾಲ್ಷಿಯಂ ಸಲ್ಫೇಟ್ ನಿಂದ ಮಾಡಲಾಗುತ್ತದೆ. ಪಿಒಪಿಯನ್ನು ಗೊಬ್ಬರದ ರೀತಿ ಬಳಸಲು ಅನುಕೂಲವಾಗುವಂತೆ ಏನಾದರೂ ಪ್ರಯೋಜನಕಾರಿಯಾಗಿ ಮಾಡುವುದು ಪ್ರಯೋಗದ ಉದ್ದೇಶವಾಗಿತ್ತು. ಅಮೋನಿಯಂ ಬೈಕಾರ್ಬೋನೆಟ್ ಅನ್ನು ಗಣೇಶ ಮೂರ್ತಿ ಮುಳುಗಿಸುವ ನೀರಿನಲ್ಲಿ ಸೇರಿಸಲಾಯಿತು. ಅದು ಎರಡು ಉತ್ಪನ್ನಗಳನ್ನಾಗಿ ಮಾಡುತ್ತಿತ್ತು- ಅಮೋನಿಯಂ ಸಲ್ಫೇಟ್ ಮತ್ತು ಕ್ಯಾಲ್ಷಿಯಂ ಹೈಡ್ರಾಕ್ಸೈಡ್.
ಮುನ್ನೂರು ಕೇಜಿ ಅಮೋನಿಯಂ ಬೈಕಾರ್ಬೊನೇಟ್ ಉಚಿತ
ಅದರಲ್ಲಿ ಅಮೋನಿಯಂ ಸಲ್ಫೇಟ್ ಅದ್ಭುತವಾದ ಗೊಬ್ಬರ. ಆ ನಂತರ ಕ್ಯಾಲ್ಷಿಯಂ ಹೈಡ್ರಾಕ್ಶೈಡ್ ಅನ್ನು ಇಟ್ಟಿಗೆ ಮಾಡುವುದಕ್ಕೆ ಬಳಸಬಹುದು. ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯಲ್ಲಿ ವಿಜ್ಞಾನಿಯಾಗಿರುವ ಶುಭಾಂಗಿ ಉಂಬರ್ಕರ್ ರ ನೆರವಿನಿಂದ ಪ್ರಯೋಗವನ್ನು ಬೆಳಗಾವಿಯ ಈ ಹಳ್ಳಿಗೂ ತರಲಾಯಿತು. ಇದಕ್ಕಾಗಿ ಪ್ರಯೋಗಾಲಯದಿಂದ ಉಚಿತವಾಗಿ ಮುನ್ನೂರು ಕೇಜಿ ಅಮೋನಿಯಂ ಬೈಕಾರ್ಬೊನೇಟ್ ನೀಡಲಾಗಿದೆ. ಬೈಕಾರ್ಬೊನೇಟ್ ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತೆ ಹಳ್ಳಿಗರನ್ನು ಉತ್ತೇಜಿಸಲಾಗಿದೆ.
ಕೃಷಿಗಾಗಿ ಗೊಬ್ಬರದ ಬಳಕೆ, ಸುತ್ತಮುತ್ತ ಹಳ್ಳಿಗರಿಗೆ ಪ್ರೇರಣೆ
ಹತ್ತಿರಹತ್ತಿರ ನಾನೂರೈವತ್ತು ಗಣೇಶ ಮೂರ್ತಿ ವಿಸರ್ಜನೆ ಮಾಡಿದ ನಂತರ ಬರುವ ಗೊಬ್ಬರವನ್ನು ಕೃಷಿಗೆ ಬಳಸಲಾಗಿದೆ. ಹತ್ತಿರದ ಹಳ್ಳಿಗಳವರು ಈ ಪ್ರಯೋಗದಿಂದ ಉತ್ತೇಜಿತರಾಗಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ರೀತಿಯ ಹೆಜ್ಜೆಗಳನ್ನು ಇರಿಸುವ ಮೂಲಕ ಪಿಒಪಿ ಮೂರ್ತಿಯನ್ನು ಗೊಬ್ಬರವನ್ನಾಗಿ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅಂತೂ ಪರಿಸರ ಕಾಪಾಡಬೇಕು ಎಂಬ ಆಲೋಚನೆ ಜತೆಗೆ ಪರಂಪರೆಯನ್ನು ಮುಂದುವರಿಸುತ್ತಿರುವ ತೃಪ್ತಿ ಇಲ್ಲಿನ ಜನರಲ್ಲಿದೆ. ಇಂಥದ್ದೊಂದು ಪ್ರಯತ್ನಕ್ಕಾಗಿ ಪ್ರದೀಪ್ ದೇವನ್ ಹಾಗೂ ಅಮೃತ್ ಗೌರವ್ ಗೆ ವಂದೇ.