ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳು, ಪೋಷಕರ ಒತ್ತಾಯ: ಡಿಸಿಎಂ
ಬೆಳಗಾವಿ, ನವೆಂಬರ್ 24: ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳು, ಪೋಷಕರ ಒತ್ತಾಯವಿತ್ತು. ಹೀಗಾಗಿ ಆನ್ಲೈನ್ ಹಾಗೂ ಆಫ್ಲೈನ್ ಕ್ಲಾಸ್ ಎರಡೂ ಆರಂಭಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ, ಸ್ವಇಚ್ಚೆಯಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಆಫ್ಲೈನ್ ಕ್ಲಾಸ್ ನಡೆಯಿದೆ. ಸವಾಲಿನ ಮಧ್ಯೆಯೂ ವಿದ್ಯಾರ್ಥಿಗಳಿಗಾಗಿ ಉತ್ತಮ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸೋತಿರುವ ಮೂವರಿಗೆ ಖಂಡಿತ ಸಚಿವ ಸ್ಥಾನ; ಸುಧಾಕರ್
ಶಿಕ್ಷಣ ಹಾಗೂ ಕೌಶಲ್ಯ ಎಲ್ಲಾ ಕ್ಷೇತ್ರಗಳಿಗೂ ಪ್ರಥಮ ಅವಶ್ಯಕತೆ ಇರುವಂತದ್ದು, ಶಿಕ್ಷಣ ಕ್ಷೇತ್ರ ಸರಿ ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಶಿಕ್ಷಣ ಕ್ಷೇತ್ರ ಉತ್ತಮಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದರು.
ಸುರಕ್ಷತಾ ಕ್ರಮಗಳಿಗೆ ಆದ್ಯತೆ
ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮುನ್ನ ತಪಾಸಣೆ ಮಾಡುತ್ತಿದ್ದೇವೆ. ತಪಾಸಣೆ ಮಾಡುವ ವೇಳೆ ಕೊರೊನಾ ಪಾಸಿಟಿವ್ ಬಂದವರಿಗೆ ಕಾಲೇಜಿಗೆ ಬರಲು ಅವಕಾಶವಿಲ್ಲ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಿ, ಮುನ್ನೆಚ್ಚರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.
ದಿನೇ ದಿನೇ ಹೆಚ್ಚೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದು, ಸಮಾಜದಲ್ಲಿ ಎಲ್ಲಾ ಕಾರ್ಯ-ಕೆಲಸಗಳು, ಜನಜೀವನ ನಡೆಯುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜುಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳ ಒಳ್ಳೆಯದಕ್ಕಾಗಿ ಸಮಯ ವ್ಯರ್ಥವಾಗದ ರೀತಿ ಅವಕಾಶ ಮಾಡಿ ಕೊಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಸಂಪರ್ಕದಲ್ಲಿದ್ದಷ್ಟು ಒಳ್ಳೆಯದಲ್ವ
ಇದೇ ವೇಳೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ, ಆಪ್ತರಿಗೆ ಮಂತ್ರಿ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ದೆಹಲಿ ಭೇಟಿ ನೀಡಿದ್ದಾರಾ ಎಂಬ ಪ್ರಶ್ನೆಗೆ, "ಇರಬಹುದೇನೋ, ಯಾರಿಗೂ ಏನೂ ಮಾಡಬೇಡಿ ಅಂತಾ ಹೇಳಕ್ಕಾಗಲ್ಲ' ಎಂದರು. ಓಡಾಡಬೇಕು, ಕೆಲಸ ಮಾಡಬೇಕು, ಸಂಪರ್ಕದಲ್ಲಿದ್ದಷ್ಟು ಒಳ್ಳೆಯದಲ್ವ? ಸರ್ಕಾರದ ಪರವಾಗಿ ತಮ್ಮ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗಬೇಕು. ರಾಜಕೀಯನೂ ಮಾಡಬೇಕು, ಅಭಿವೃದ್ಧಿಯನ್ನೂ ಮಾಡಬೇಕು. ಇಲಾಖೆಯನ್ನು ನಡೆಸಬೇಕು, ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿರಬೇಕು. ಅದು ರಮೇಶ್ ಜಾರಕಿಹೊಳಿಯವರ ಸ್ಟೈಲ್ ಅಲ್ವಾ? ಎಂದು ಡಿಸಿಎಂ ಅಶ್ವಥ್ ನಾರಾಯಣ ವಿವರಿಸಿದರು.
ಏನು ಮಾತುಕತೆ ಆಗಿದೆ ನನಗೆ ಗೊತ್ತಿಲ್ಲ
ಸಂಪುಟ ವಿಸ್ತರಣೆ ವಿಚಾರ ಸಿಎಂ ಯಡಿಯೂರಪ್ಪನವರು ಕೈಗೆತ್ತಿಕೊಂಡಿದ್ದಾರೆ. ಸೂಕ್ತ ಕಾಲ ಬಂದಾಗ ಸಿಎಂ ಸಂಪುಟ ವಿಸ್ತರಣೆ ಮಾಡುತ್ತಾರೆ. ವಿಸ್ತರಣೆಯನ್ನೂ ಮಾಡಬಹುದು, ಪುನಾರಚನೆ ಮಾಡಬಹುದು. ಒಳ್ಳೆಯ ಆಡಳಿತ ನೀಡಲು ಏನು ಮಾಡುತ್ತಾರೆ ನೋಡಬೇಕು ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆ ಏನು ಮಾತುಕತೆ ಆಗಿದೆ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಸುದ್ದಿ ಇಲ್ಲ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.
Recommended Video
ಕಟೀಲ್ ಕ್ರಮ ಕೈಗೊಳ್ಳುತ್ತಾರೆ
ನಮ್ಮ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ನಾವು ಇದನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಇಂತಹ ರೂಮರ್ಗಳು, ಸುಳ್ಳು ಸುದ್ದಿಗಳು ರಾಜಕೀಯದಲ್ಲಿ ಹರಿದಾಡುತ್ತವೆ. ನಮ್ಮ ಪಕ್ಷದವರು ಈ ಬಗ್ಗೆ ಮಾತನಾಡುವವರ ವಿರುದ್ಧ ನಳಿನ್ಕುಮಾರ್ ಕಟೀಲ್ ಕ್ರಮ ಕೈಗೊಳ್ಳುತ್ತಾರೆ ಎಂದು ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ನಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.