ದಲಿತ ಸಂಘಟನೆಗಳ ಪ್ರತಿಭಟನೆ: ಅಂಗಡಿ, ಬಸ್ಗಳ ಮೇಲೆ ಕಲ್ಲು ತೂರಾಟ
ಬೆಳಗಾವಿ, ಜನವರಿ 10: ಭೀಮ ಕೊರೆಗಾಂವ್ ನಲ್ಲಿ ನಡೆದ ದಲಿತರ ಮೇಲಿನ ಹಿಂಸಾಚಾರ ಖಂಡಿಸಿ ದಲಿತ ಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿದೆ.
ದಲಿತ ಪರ ಸಂಘಟನೆಗಳ ಸದಸ್ಯರು ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಾ, ಅಂಗಡಿ ಮುಂಗಟ್ಟುಗಳನ್ನು ಬಲವಂತದಿಂದ ಮುಚ್ಚಲು ಪ್ರಯತ್ನಿಸಿದರು. ಆದರೆ ಇದಕ್ಕೆ ಕೆಲವು ಅಂಗಡಿಗಳವರು ವಿರೋಧ ವ್ಯಕ್ತಪಡಿಸಿ ವಾಗ್ವಾದಕ್ಕಿಳಿದರು. ಆಗ ಬೈಕ್ ನಲ್ಲಿ ಬಂದ ಕೆಲವು ಕಿಡಿಗೇಡಿಗಳು ಎರಡು ಅಂಗಡಿಗಳಿಗೆ ಕಲ್ಲು ತೂರಿ ಗ್ಲಾಸುಗಳನ್ನು ಒಡೆದರು.
ಅಂಗಡಿಗಳಿಗೆ ಕಲ್ಲು ಬಿದ್ದ ವಿಷಯ ತಿಳಿಯುತ್ತಿದ್ದಂತೆ ಚೆನ್ನಮ್ಮ ವೃತ್ತ ಮತ್ತಿತರ ಕಡೆಗಳಲ್ಲಿ ಅಂಗಡಿ ಮಾಲೀಕರು ಅಂಗಡಿ ಬಾಗಿಲು ಹಾಕಿದರು. ಅಲ್ಲಿಗೆ ಸುಮ್ಮನಾಗದ ಕೆಲವು ಪ್ರತಿಭಟನಾಕಾರರು ನಗರ ಸಾರಿಗೆ ಬಸ್ಗೂ ಕಲ್ಲು ಹೊಡೆದು ಜಖಂ ಗೊಳಿಸಿದ್ದಾರೆ.
ಅಂಗಡಿಗೆ ಕಲ್ಲು ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚೆನ್ನಮ್ಮ ವೃತ್ತದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದ್ದು ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಚೆನ್ನಮ್ಮ ವೃತ್ತದಲ್ಲಿ ನಿಯೋಜಿಸಲಾಗಿದೆ.