ಉತ್ತರ ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಸರ್ಕಾರ ವಿಫಲ : ಶೆಟ್ಟರ್ ಆರೋಪ
ಬೆಳಗಾವಿ, ನವೆಂಬರ್ 20 : ಕೃಷ್ಣಾ ಕಣಿವೆಯ ನೀರಾವರಿ ಯೋಜನೆಗೆ ಪ್ರತಿವರ್ಷ ಹತ್ತು ಸಾವಿರ ಕೋಟಿ ರೂ.ತೆಗೆದಿರಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಾತಿಗೆ ತಪ್ಪಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು.
ಡಾ. ನಂಜುಂಡಪ್ಪ ವರದಿಯ ಮರುಮೌಲ್ಯಮಾಪನವಾಗಬೇಕು: ಶೆಟ್ಟರ್
ವಿಧಾನ ಸಭೆಯಲ್ಲಿ ಸೋಮವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದರು ಹಾಗೂ ಆಗ ಕೂಡಲ ಸಂಗಮಕ್ಕೆ ತೆರಳಿ ಕೃಷ್ಣ ಕಣಿವೆ ಯೋಜನೆಗೆ ಪ್ರತಿ ವರ್ಷ10 ಸಾವಿರ ಕೋಟಿ ರೂ. ತೆಗೆದಿರಿಸುವ ಮೂಲಕ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಶಪಥ ಮಾಡಿದ್ದರು.
ಆದರೆ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷರು ಆಗಿರವ ಪರೇಶ್ವರ್ ಸೇರಿದಂತೆ ಕಾಂಗ್ರೆಸ್ ಪಕ್ಷವು ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಜಾಹೀರಾತಿನ ಸರ್ಕಾರ ನೀರಾವರಿ ಯೊಜನೆಗಳ ಬಗ್ಗೆ ಬರಿ ಜಾಹೀರಾತು ಕೊಡ್ತಾರೆ. ಅಲ್ಲಿ ಕೆಲಸವೇ ಆರಂಭವಾಗಿಲ್ಲ ಮಾಹಿತಿ ಹಕ್ಕಿನಡಿ ನಾವು ಪಡೆದ ಮಾಹಿತಿಯಲ್ಲಿ ನೂರು ಕೋಟಿ ರೂ.ಗಳನ್ನ ಕೇವಲ ಜಾಹೀರಾತಿಗೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಶೆಟ್ಟರ್ ಅವರ ಮಾತಿಗೆ ಸಚಿವ ದೇಶಪಾಂಡೆ ಪ್ರತಿಕ್ರಯಿಸಿ ನಾವು ಆ ರೀತಿ ಹೇಳಿಲ್ಲ. ಪ್ರತಿ ವರ್ಷ ನೀರಾವರಿ ಯೋಜನೆಗೆ ಹತ್ತು ಸಾವಿರ ಕೋಟಿಯಂತೆ ನೀಡುತ್ತೇವೆ ಎಂದು ಹೇಳಿದ್ದೇವೆ ಎಂದು ಸಮರ್ಥಿಸಿಕೊಂಡರು. ಸಚಿವ ಆರ್.ವಿ. ದೇಶಪಾಂಡೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಶಾಸಕ ಗೋವಿಂದ್ ಕಾರಜೋಳ ನೀವು ಮಾತಾಡಿರೋ ಸಿಡಿ ನನ್ನ ಬಳಿ ಇದೆ ಎಂದರು. ಈ ವಿಚಾರವಾಗಿ ಹಲವು ಬಾರಿ ಚರ್ಚೆಯಾಗಿದೆ ಎಂದು ವಾಗ್ವಾದಕ್ಕೆ ಸ್ಪೀಕರ್ ತೆರೆ ಎಳೆದರು.