ಬೆಳಗಾವಿಯಲ್ಲಿ ಗೋಡೆ ಹಾರಿ ಪರೀಕ್ಷೆಯಲ್ಲಿ ಕಾಪಿ ಚೀಟಿ ನೀಡುವ ಯತ್ನ
ಬೆಳಗಾವಿ, ಜೂನ್ 27: ಕೊರೊನಾ ಆತಂಕದ ನಡುವೆ ಇಂದು ಎಸ್ಎಸ್ಎಲ್ಸಿಯ ಎರಡನೇ ವಿಷಯ, ಗಣಿತದ ಪರೀಕ್ಷೆ ನಡೆಯುತ್ತಿದೆ. ಆದರೆ, ಬೆಳಗಾವಿಯಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಗೋಕಾಕದ ಜಿಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವ ಪ್ರಯತ್ನಗಳು ನಡೆದಿವೆ. ಕೆಲವು ಯುವಕರು ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ನೀಡಲು ಶಾಲಾ ಕಟ್ಟಡದ ಗೋಡೆ ಹಾರಿ ಬಂದಿದ್ದಾರೆ. ಇದು ಪೊಲೀಸರ ಗಮನಕ್ಕೆ ಬಂದಿದ್ದು, ಯುವಕರ ಬೆನ್ನು ಹತ್ತಿದ್ದಾರೆ.
ಕೈ ಇಲ್ಲದೆ ಕಾಲಿನಲ್ಲಿ ಪರೀಕ್ಷೆ ಬರೆದ ಬಂಟ್ವಾಳ ಹುಡುಗ
ಪೊಲೀಸ್ ಬೆನ್ನಟ್ಟಿದರೂ, ಯುವಕರು ಬಿಡದೆ ಕಾಪಿ ಚೀಟಿ ಹಿಡಿದು ಗೋಡೆ ಹತ್ತಿದ್ದಾರೆ. ಮೈದಾನದ ತುಂಬ ಅಟ್ಟಾಡಿಸಿ ಚದುರಿಸಿದರೂ ಯುವಕರು ಕೇಳಲಿಲ್ಲ. ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆದರೂ, ಕಾಪಿ ನೀಡಲು ಬರುವವರಿಗೆ ಬರವಿಲ್ಲದಂತೆ ಆಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯ ಮೊದಲ ದಿನ ಕಲಬುರಗಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿ ಲೋಕೋಪಯೋಗಿ ವಸತಿ ಗೃಹದ ಹತ್ತಿರದಲ್ಲಿರುವ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ನಕಲಿ ಮಾಡುವ ಪ್ರಯತ್ನಗಳು ನಡೆದಿತ್ತು. ಕೆಲವು ಯುವಕರು ವಿದ್ಯಾರ್ಥಿಗಳಿಗೆ ಚೀಟಿ ನೀಡುವ ದೃಶ್ಯಗಳು ಕಂಡುಬಂದಿದ್ದವು.