ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ತಾರೆ: ಸತೀಶ್ ಜಾರಕಿಹೊಳಿ ಹೊಸ ಬಾಂಬ್
ಬೆಳಗಾವಿ, ಅಕ್ಟೋಬರ್ 14: ಬಿಜೆಪಿಯ ಕೆಲವು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲು ಈಗಾಗಲೇ ಸಿದ್ಧತೆ ನಡೆಸಿದ್ದು, ಪಕ್ಷದ ಹೈಕಮಾಂಡ್ಅನ್ನು ಭೇಟಿ ಮಾಡಿದ್ದಾರೆ ಎಂದು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಸೇರಿಕೊಳ್ಳುವ ಆಸಕ್ತಿ ತೋರಿಸಿದ್ದಾರೆ. ಹೈಕಮಾಂಡ್ಅನ್ನೂ ಅವರು ಭೇಟಿ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಯಿಂದ ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದನ್ನು ಅರಿತಿರುವ ಅವರು ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದಾರೆ. ಕೆಲವರು ಹೈಕಮಾಂಡ್ ಮತ್ತು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.
Recommended Video
ಕಥೆಯ ಕೇಳಿರಣ್ಣ... ಹಾಡಿನ ಮೂಲಕ ರಮೇಶ್ ಕಾಲೆಳೆದ ಸತೀಶ್ ಜಾರಕಿಹೊಳಿ
ಆಯಾ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ. ಕಾಂಗ್ರೆಸ್ಗೆ ಬಂದವರಿಗೆ ಹೈಕಮಾಂಡ್ ಟಿಕೆಟ್ ನೀಡಬಹುದು. ಅವರಿಗೂ ಸಹ ಸ್ಪರ್ಧಿಸುವ ಶಕ್ತಿ ಇರುತ್ತದೆ. ಆದಷ್ಟು ಬೇಗನೆ ಉಪಚುನಾವಣೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡುವಂತೆ ಕೋರಿದ್ದೇವೆ ಎಂದು ತಿಳಿಸಿದರು.
ಗೋಕಾಕ್ ಲೂಟಿ ಹೊಡೆಯುತ್ತಿದ್ದಾರೆ
ಗೋಕಾಕ್ ಉಪ ಚುನಾವಣೆಯ ಕುರಿತು ಮಾತನಾಡಿದ ಅವರು, ಈಗಾಗಲೇ ಎರಡನೆಯ ಹಂತ ಪ್ರಚಾರ ಆರಂಭಿಸಲಾಗಿದೆ. ಗೋಕಾಕ್ ಲೂಟಿ ಮಾಡಿದವರ ಕುರಿತು ಹಾಡುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಸಿದ್ಧಪಡಿಸುತ್ತಿದ್ದೇವೆ. ಒಂದೆಡೆ ಜನರು ಕಣ್ಣೀರು ಹಾಕುತ್ತಿದ್ದಾರೆ. ಇನ್ನೊಂದೆಡೆ ನಗರಸಭೆ ಸದಸ್ಯರು, ಮುಖಂಡರು ಸೇರಿ ಲೂಟಿ ಹೊಡೆಯುತ್ತಿದ್ದಾರೆ. ಎಂಟು ಸಾವಿರ ಟ್ರಿಪ್ ಮಣ್ಣನ್ನು ಲೂಟಿ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ರಮೇಶ್ ನಾಮಕಾವಸ್ತೆ ಮಾತ್ರ
ಚುನಾವಣಾ ಪ್ರಚಾರಗಳಲ್ಲಿ ಅಂಬಿರಾವ್ ಪಾಟೀಲ್ ಅವರನ್ನು ಗುರಿಯನ್ನಾಗಿರಿಸಿಕೊಳ್ಳಲಾಗಿದೆ. ಇಲ್ಲಿ ರಮೇಶ್ ಜಾರಕಿಹೊಳಿ ನಾಮಕಾವಸ್ತೆ ಮಾತ್ರ. ಎಲ್ಲ ಕಾರ್ಯದಲ್ಲಿಯೂ ಅಂಬಿರಾವ್ ಇದ್ದಾರೆ. ಜಾರಕಿಹೊಳಿ ಅಣ್ಣ ತಮ್ಮಂದಿರು ಎಲ್ಲರೂ ಒಂದೇ ಎಂದು ಹೇಳುತ್ತಾರೆ. ಆದರೆ ನಾವೆಲ್ಲರೂ ಬೇರೆ ಬೇರೆ. ಗೋಕಾಕ್ನಲ್ಲಿ ವಸ್ತುಸ್ಥಿತಿ ಬೇರೆ ಇದೆ. ಇವರೆಲ್ಲ ಒಂದೇ ಎಂಬ ಭಾವನೆಯನ್ನು ಜನರಿಂದ ತೆಗೆದುಹಾಕಿ, ನಾವು ಒಂದಾಗಿಲ್ಲ ಎಂಬುದನ್ನು ತೋರಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಮತ್ತೆ ಸಿಎಂ ಕಾಟಾಚಾರಕ್ಕೆ ಬರದಿರಲಿ; ಸತೀಶ್ ಜಾರಕಿಹೊಳಿ ಕೊಂಕು
ನಾನು, ರಮೇಶ್ ಬೇರೆ ಬೇರೆ
ರಾಜಕೀಯ ವಿಚಾರದಲ್ಲಿ ನಾನು ಮತ್ತು ರಮೇಶ್ ಒಂದೇ ಅಲ್ಲ. ಯಾವತ್ತಿಗೂ ಇಬ್ಬರೂ ಭಿನ್ನ. ರಮೇಶ್ ಜಾರಕಿಹೊಳಿ ಜನರ ಸಮಸ್ಯೆ ಆಲಿಸುವ ಬದಲು ಅಮೆರಿಕದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಜನರ ಸಮಸ್ಯೆ ಕೇಳುತ್ತಿದ್ದೇವೆ. ಗೋಕಾಕ್ನ ವ್ಯವಹಾರಗಳನ್ನು ಅಂಬಿರಾವ್ ಮತ್ತು ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಇಲ್ಲಿನ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರಕ್ಕೆ
ಗೋಕಾಕ್ನಲ್ಲಿ ಅಂಬಿರಾವ್ ಹಿಡಿತ ತಪ್ಪಿಸಲು ಹೋರಾಟ ನಡೆಸುತ್ತಿದ್ದೇವೆ. ಇಲ್ಲಿ ಇಡೀ ತಂಡ ಅವರದ್ದೇ ಇದೆ. ಹೀಗಾಗಿ ಅವರನ್ನು ಗೋಕಾಕ್ನಿಂದ ಹೊರಹಾಕಬೇಕಿದೆ. ಚುನಾವಣಾ ಆಯೋಗ ಈಗಾಗಲೇ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದೆ. ನಗರಸಭೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಭ್ರಷ್ಟಾಚಾರದಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರ ಪಾಲಿದೆ. ಇದರ ಬಗ್ಗೆ ಎಲ್ಲ ಮಾಹಿತಿ ಹೊರಹಾಕುತ್ತೇವೆ ಎಂದರು. ಗೋಕಾಕ್ ಉಪ ಚುನಾವಣೆಯ ಪ್ರಚಾರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಎಲ್ಲ ಪ್ರಮುಖಡರೂ ಬರಲಿದ್ದಾರೆ ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಕೊಡಗು ಡಿಸಿಸಿ ಬ್ಯಾಂಕ್ ಸಾಲ ನೀಡಿಲ್ಲವಂತೆ...