ಕೊನೆಗೂ ಸಾಮಾಜಿಕ ಅಂತರ ಕಾಯ್ದುಕೊಂಡ ಬೆಳಗಾವಿ ಮಾರುಕಟ್ಟೆ
ಬೆಳಗಾವಿ, ಮಾರ್ಚ್ 30: ಕೊರೊನಾ ವೈರಸ್ ಹರಡದಂತೆ ತಡೆಯಲು ಭಾರತದಾದ್ಯಂತ ಲಾಕ್ಡೌನ್ ಮಾಡಿದ ಆರಂಭದ ದಿನಗಳಲ್ಲಿ, ಉತ್ತರ ಕರ್ನಾಟಕದ ಅತಿದೊಡ್ಡ ತರಕಾರಿ ಮಾರುಕಟ್ಟೆಯಲ್ಲಿ ಫುಲ್ ರಶ್ ಆಗಿತ್ತು. ಆದರೆ ಈಗ ಪೊಲೀಸರು ವ್ಯಾಪಾರಿಗಳ ಜೊತೆ ಸರಣಿ ಸಭೆಗಳನ್ನು ಮಾಡಿ ಎಲ್ಲ ಗದ್ದಲಗಳಿಗೆ ಬ್ರೇಕ್ ಹಾಕಿದ್ದಾರೆ.
ಬೆಳಗಾವಿ ಎಪಿಎಂಸಿ ಆವರಣದಲ್ಲಿ ಇರುವ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಜೊತೆ ಕಳೆದ ಎರಡು ದಿನಗಳಿಂದ ಸಭೆಗಳನ್ನು ಮಾಡುವುದರ ಮೂಲಕ ಬೆಳಗಾವಿ ಪೊಲೀಸರು ಇಲ್ಲಿಯ ವಹಿವಾಟವನ್ನು ವ್ಯವಸ್ಥಿತಗೊಳಿಸಿದ್ದಾರೆ.
ಈಗ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಯುತ್ತಿದೆ. 2 ದಿನಗಳ ಹಿಂದೆ ಜನರಿಂದ ತುಂಬಿ ತುಳಕುತ್ತಿದ್ದ ತರಕಾರಿ ಮಾರುಕಟ್ಟೆ ಈಗ ಖಾಲಿ ಖಾಲಿಯಾಗಿದೆ. ಆದರೂ ತರಕಾರಿ ವ್ಯಾಪಾರಿಗಳು ಒಬ್ಬೊಬ್ಬರಾಗಿ, ತರಕಾರಿ ಖರೀದಿ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಈಗ ಸಾಮಾನ್ಯವಾಗಿದೆ.
ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಬೆಳಗಾವಿಯ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡದೇ ಜನಜಂಗುಳಿಗೆ ಪೂರ್ಣವಿರಾಮ ನೀಡಿದ್ದಾರೆ.
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಓರ್ವ ಎಸಿಪಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟಿಗೆ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ ವೇಳೆ ಚಿಲ್ಲರೆ ವ್ಯಾಪಾರಸ್ಥರಿಗೆ ತರಕಾರಿ ಖರೀದಿಗೆ ಅವಕಾಶ ಮಾಡಿ ಕೊಡಲಾಗಿದೆ. ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ರೈತರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ತರಕಾರಿ ಖರೀದಿಗೆ ಅವಕಾಶವಿಲ್ಲ.
ಹಾಪ್ಕಾಮ್ಸ್ ಹಾಗೂ ಎಪಿಎಂಸಿ ವಾಹನಗಳ ಮೂಲಕ ತರಕಾರಿ ಮಾರಾಟ ಮಾಡುತ್ತಿವೆ. ನಗರದ 58 ವಾರ್ಡ್ ಗಳಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗಾವಿ ನಗರ ನಿವಾಸಿಗಳ ಮನೆ ಬಾಗಿಲಿಗೆ ತಾಜಾ ತರಕಾರಿ ಬರಲಿದೆ.