ವಿಧಾನ ಪರಿಷತ್ ಉಪಸಭಾಪತಿಯಾಗಿ ಧರ್ಮೇಗೌಡ ಅವಿರೋಧ ಆಯ್ಕೆ
ಬೆಳಗಾವಿ, ಡಿಸೆಂಬರ್ 19: ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಎಸ್.ಎಲ್. ಧರ್ಮೇಗೌಡ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಮಾಜಿ ಶಾಸಕ ಲಕ್ಷ್ಮಯ್ಯ ಅವರ ಪುತ್ರರಾಗಿರುವ ಎಸ್.ಎಲ್. ಧರ್ಮೇಗೌಡ ಅವರು 40 ವರ್ಷಕ್ಕೂ ಹೆಚ್ಚಿನ ರಾಜಕೀಯ ಅನುಭವ ಹೊಂದಿದ್ದು, ತಮ್ಮ ರಾಜಕೀಯ ಜೀವನವನ್ನು ಮಂಡಲಪಂಚಾಯತ್ ಮುಖಾಂತರ ಆರಂಭಿಸಿ ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ.
ಪಂಚತಾರಾ ಹೋಟೆಲ್ ನಲ್ಲಿ ಎಚ್ಡಿಕೆ: ಬಿಎಸ್ವೈ ಏಟಿಗೆ ಕುಮಾರಸ್ವಾಮಿ ತಿರುಗೇಟು
ವಿಧಾನಸಭೆಯ ಸದಸ್ಯರಾಗಿ ಕೆಳಮನೆಯ ಅನುಭವವಿರುವ ಇವರು ಇದೇ ಮೊದಲ ಬಾರಿಗೆ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಧರ್ಮೇಗೌಡರು ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಿ ಅನೇಕ ಸಂಸ್ಥೆಗಳೊಂದಿಗೆ ದುಡಿದಿದ್ದಾರೆ. ಸಭಾಪತಿಗಳು ಇಂದಿನ ಚುನಾವಣೆಯಲ್ಲಿ ಧರ್ಮೇಗೌಡರ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು.
ನಂತರ ಮಾತನಾಡಿದ ಸಭಾನಾಯಕಿ ಹಾಗೂ ಸಚಿವೆ ಡಾ.ಜಯಮಾಲಾ ಅವರು ಧರ್ಮೇಗೌಡರು ತಮ್ಮ ಹೆಸರಲ್ಲಿಯೇ ಧರ್ಮವನ್ನು ಹೊಂದಿದ್ದು, ಸದನದಲ್ಲಿ ರಾಜಧರ್ಮವನ್ನು ಪಾಲಿಸಲಿ ಎಂದು ಶುಭ ಕೋರಿದರು.
ಸದನದಲ್ಲಿ ಮಹಿಳೆಯರ ಸಂಖ್ಯೆ ಕ್ಷೀಣ,ನಮಗೆ ಅವಕಾಶ ಕೊಡಿ: ಸೌಮ್ಯಾ ರೆಡ್ಡಿ
ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಧಾನ ಪರಿಷತ್ತಿನ ಇತಿಹಾಸದಲ್ಲಿಯೇ ಅಣ್ಣ ಮತ್ತು ತಮ್ಮ ಏಕ ಕಾಲದಲ್ಲಿ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿರುವುದು ವಿಶಿಷ್ಟವಾಗಿದೆ. ಅಣ್ಣ ಧರ್ಮೇಗೌಡರು ಉಪಸಭಾಪತಿಯಾಗಿದ್ದರೆ ಅವರ ತಮ್ಮ ಬೋಜೆಗೌಡ ಅವರು ಸದಸ್ಯರಾಗಿದ್ದಾರೆ. ಉಪಸಭಾಪತಿಗಳು ವಿರೋಧ ಪಕ್ಷದ ಸದಸ್ಯರಿಗೆ ಹೆಚ್ಚಿನ ಅವಕಾಶವನ್ನು ನೀಡಲಿ ಎಂದು ಹೇಳಿದರು.
ರೈತ ಮಹಿಳೆ ಬಗ್ಗೆ ಹೇಳಿಕೆ: ಸದನದಲ್ಲಿ ಕುಮಾರಸ್ವಾಮಿ ಸ್ಪಷ್ಟೀಕರಣ
ಈ ಸಮಯದಲ್ಲಿ ಉಪಸಭಾಪತಿಗಳ ಕುರಿತು ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ, ಸಿ.ಎಂ. ಇಬ್ರಾಹಿಂ ಸೇರಿದಂತೆ ಅನೇಕ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಶುಭ ಕೋರಿದರು.
ಜೆಡಿಎಸ್ನ ಧರ್ಮೇಗೌಡ ಅವರು ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಧರ್ಮೇಗೌಡ ಹೊರತು ಪಡಿಸಿ ಇನ್ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.