ಸಿದ್ಧರಾಮಯ್ಯ ನನ್ನ ಜ್ಯೂನಿಯರ್: ರಮೇಶ್ ಜಾರಕಿಹೊಳಿ
ಬೆಳಗಾವಿ, ನವೆಂಬರ್ 15: ಸಿದ್ಧರಾಮಯ್ಯಗಿಂತ ಕಾಂಗ್ರೆಸ್ ನಲ್ಲಿ ನಾನೇ ಸೀನಿಯರ್ ಲೀಡರ್ ಆಗಿದ್ದೆ, ಅವರು ಇತ್ತಿಚೇಗೆ ಕಾಂಗ್ರೆಸ್ ಸೇರಿದ್ದಾರೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ನನ್ನ ರಾಜಕೀಯ ಗುರುಗಳು ಹೆಚ್. ವಿಶ್ಬನಾಥ್, ನಾನು ಅವರು ಮೂಲ ಕಾಂಗ್ರೆಸ್ಸಿಗರು, ಸಿದ್ಧರಾಮಯ್ಯ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
"ಲಖನ್ ಬೆನ್ನಿಗೆ ಚೂರಿ ಹಾಕಿದ" ಎಂದು ಮಾತಿನಲ್ಲೇ ಇರಿದ ರಮೇಶ್ ಜಾರಕಿಹೊಳಿ
ಗೋಕಾಕ್ ಕ್ಷೇತ್ರದಲ್ಲಿ ತಮ್ಮ ಸಹೋದರ ಲಖನ್ ಜಾರಕಿಹೊಳಿ ಎದುರಾಳಿಯಾಗುವ ಬಗ್ಗೆ ಮಾತನಾಡಿದ ರಮೇಶ್, ಲಖನ್ ಗೆ ದೇವರು ಓಳ್ಳೆಯ ಬುದ್ಧಿ ಕೊಡಲಿ, ಅವನು ಬನ್ನಿಗೆ ಚೂರಿ ಹಾಕಿದ್ದಾನೆ. ಡಿ.05 ರವರೆಗೂ ನನ್ನ ತಮ್ಮ ಅಲ್ಲ, ರಾಜಕೀಯ ವಿರೋಧಿ ಅಷ್ಟೇ ಎಂದರು. ಗೆಲುವಿನ ಅಂತರ 1 ಮತವಾಗಲಿ 1 ಲಕ್ಷ ಮತವಾಗಲಿ ನನ್ನ ಗೆಲುವು ಖಚಿತ ಎಂದು ಚುನಾವಣಾ ಆಖಾಡಕ್ಕೆ ಸಿದ್ಧವಾಗಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.
ಇನ್ನು ಎಲ್ಲಾ 15 ಕ್ಷೇತ್ರಗಳಲ್ಲಿ ನಮ್ಮ ಗೆಲುವು ನಿಶ್ಚಿತ, ರಾಣೇಬೆನ್ನೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ಶಂಕರ್ ಗೆ ಎಂಎಲ್ಸಿ ಸ್ಥಾನ ಕೊಡಿಸುವ ಜವಾಬ್ದಾರಿ ನನ್ನದು, ಈ ಕುರಿತು ಮುಖ್ಯಮಂತ್ರಿ ಬಳಿ ಮಾತನಾಡಿರುವೆ, ಮಂತ್ರಿ ಸ್ಥಾನದ ಭರವಸೆಯನ್ನು ನೀಡಿದ್ದಾರೆ ಎಂದರು.