ಜಾರಕಿಹೊಳಿ ಸಹೋದರರ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ
ಬೆಳಗಾವಿ, ಆಗಸ್ಟ್ 30: ಸಿದ್ದರಾಮಯ್ಯ ಅವರು ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರೊಂದಿಗೆ ಸಭೆ ನಡೆಸಿದ ವಿಷಯ ತಡವಾಗಿ ವರದಿಯಾಗಿದೆ.
ಬುಧವಾರ ಗೋಕಾಕ್ ಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರನ್ನು ಕಾರಿನಲ್ಲೇ ಕೂರಿಸಿಕೊಂಡು ಕೆಲ ಸಮಯ ಗುಪ್ತವಾಗಿ ಮಾತುಕತೆ ನಡೆಸಿದರು.
ಮೈಕೊಡವಿ ಎದ್ದ ಸಿದ್ದರಾಮಯ್ಯ ಪಕ್ಷ ಸಂಘಟನೆಗೆ ಮುಂದಾಗಿದ್ದೇಕೆ?
ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಬ್ರೇಕ್ ಹಾಕಲು ಈ ಸಭೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಗೋಕಾಕ್ ಕ್ಷೇತ್ರಕ್ಕೆ ಕೆಲವೇ ತಿಂಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದ ಆ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿಯನ್ನೇ ಕಾಂಗ್ರೆಸ್ನಿಂದ ಸ್ಪರ್ಧೆಗೆ ನಿಲ್ಲಿಸುವ ಆಶಯ ಸಿದ್ದರಾಮಯ್ಯ ಅವರಿಗಿದೆ ಎನ್ನಲಾಗಿದೆ.
ಇದರ ಬಗ್ಗೆಯೇ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಬಳಿ ಮಾತನಾಡಿದ್ದಾರೆ ಎನ್ನಲಾಗಿದೆ. ನೆರೆ ವೀಕ್ಷಣೆಗೆಂದು ತೆರಳಿರುವ ಸಿದ್ದರಾಮಯ್ಯ ಎಲ್ಲ ಕ್ಷೇತ್ರದಲ್ಲಿ ನೆರೆ ವೀಕ್ಷಣೆ ಜೊತೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನೂ ಭೇಟಿಯಾಗಿ ಪಕ್ಷ ಸಂಘಟನೆಯಲ್ಲೂ ತೊಡಗಿದ್ದಾರೆ.
ಬೆಂಬಲಕ್ಕೆ ಬರಲಿಲ್ಲವೇ ಕಾಂಗ್ರೆಸ್? ಡಿಕೆಶಿ ಉತ್ತರವೇನು?
ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿ ಗೆದ್ದಿದ್ದ ರಮೇಶ್ ಜಾರಕಿಹೊಳಿ ಆ ನಂತರ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರುಳುವಂತೆ ಮಾಡಿದ್ದರು. ಹಾಗಾಗಿ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಸಿದ್ದರಾಮಯ್ಯ ಅವರ ಕುಟುಂಬ ಸದಸ್ಯದವರನ್ನೇ ದಾಳವಾಗಿ ಪ್ರಯೋಗಿಸುತ್ತಿದ್ದಾರೆ ಎನ್ನಾಗುತ್ತಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ರಮೇಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಅಷ್ಟೆ ಅಲ್ಲದೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಅವರನ್ನು ಅನರ್ಹ ಸಹ ಮಾಡಲಾಗಿದೆ. ಅವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ.