ದರ್ಶನ್ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೊಳ್ ಕಣ್ಣೀರಧಾರೆ
ಬೆಳಗಾವಿ, ಆಗಸ್ಟ್ 11: ಆನಂದ್ ಅಪ್ಪುಗೋಳ್ ಎಂದರೆ ತಕ್ಷಣಕ್ಕೆ ನೆನಪಾಗುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ. ಈ ಚಿತ್ರವನ್ನು ನಿರ್ಮಿಸಿ ಹೊಸ ಇತಿಹಾಸ ಸೃಷ್ಟಿಸಿದ ಆನಂದ್ ಈಗ ಕಣ್ಣೀರಿಡುತ್ತಿದ್ದಾರೆ.
ಆನಂದ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯಲ್ಲಿ ಹಣ ತೊಡಗಿಸಿರುವ ಗ್ರಾಹಕರು ಹಣ ವಾಪಸ್ ಮಾಡುವಂತೆ ದುಂಬಾಲು ಬಿದ್ದಿದ್ದಾರೆ.
ಸರಿ ಸುಮಾರು 300 ಕೋಟಿ ರು ಮೊತ್ತವನ್ನು ಹಿಂತಿರುಗಿಸಲಾಗದೆ ಆನಂದ್ ಪರದಾಡುತ್ತಿದ್ದಾರೆ. ಬ್ಯಾಂಕ್ ವಿರುದ್ಧ ಗ್ರಾಹಕರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಆನಂದ್ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ್ದಾರೆ.
'ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ನನ್ನ ಆಸ್ತಿ ಮಾರಿಯಾದ್ರೂ ಆದಷ್ಟು ಬೇಗ ಹಣ ಹಿಂದುರಿಗಿಸುತ್ತೇನೆ. ನಾನು ಹಾಗೇ ಸಾಯುವ ಮನುಷ್ಯನಲ್ಲಾ' ಎಂದು ಗಳಗಳನೆ ಕಣ್ಣೀರು ಸುರಿಸಿದರು.
'ಅಪನಗದೀಕರಣದ ನಂತರ ಆಸ್ತಿ ಮಾರಲು ಸಾಧ್ಯವಾಗಿಲ್ಲ. ಎಲ್ಲವನ್ನು ವೈಟ್ ನಲ್ಲೆ ತೋರಿಸಬೇಕಂತೆ, ಅದರಿಂದ ನನಗೆ ನಷ್ಟವಾಗಿದೆ. ಎರಡರಿಂದ ಮೂರು ತಿಂಗಳಲ್ಲಿ ಗ್ರಾಹಕರಿಗೆ ಹಣ ಸಂದಾಯ ಮಾಡುತ್ತೇನೆ. ಗ್ರಾಹಕರು ಯಾರೂ ಧೃತಿಗೆಡಬೇಕಾಗಿಲ್ಲ' ಎಂದು ಆನಂದ್ ಭರವಸೆ ನೀಡಿದ್ದಾರೆ.
ದರ್ಶನ್ ಅಭಿನಯದ ರಾಜ್ಯ ಪ್ರಶಸ್ತಿ ವಿಜೇತ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ನಿರ್ಮಾಪಕರಾದ ಆನಂದ್ ಅವರ ಈ ಸಹಕಾರಿ ಬ್ಯಾಂಕ್ 15ಕ್ಕೂ ಅಧಿಕ ವರ್ಷಗಳಿಂದ 40ಕ್ಕೂ ಅಧಿಕ ಬ್ರ್ಯಾಂಚ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕೆಲ ತಿಂಗಳುಗಳಿಂದ ಬ್ಯಾಂಕ್ ತನ್ನ ವಹಿವಾಟು ಸ್ಥಗಿತಗೊಳಿಸಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.