ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಶಿವಮೊಗ್ಗದ ಜೆಡಿಎಸ್ ಪ್ರಭಾವಿ ನಾಯಕ
ಬೆಳಗಾವಿ, ಏಪ್ರಿಲ್ 8: ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡ ಸೇರಿ ಹಲವು ಜೆಡಿಎಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಹಿಂದೆ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮಂಜುನಾಥ ಗೌಡ ಅವರನ್ನು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಪಕ್ಷದ ಶಾಲು, ಧ್ವಜ ನೀಡಿ ಡಿ.ಕೆ ಶಿವಕುಮಾರ್ ಬರಮಾಡಿಕೊಂಡರು.
ಶಿವಮೊಗ್ಗದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತೊಂದು ಹಿನ್ನಡೆ!
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಮಂಜುನಾಥ ಗೌಡ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ನಮಗೆ ಶಕ್ತಿ ಆಗಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಹಕಾರ ರಂಗದಲ್ಲಿ ಮಂಜುನಾಥ ಗೌಡರ ಸೇವೆ ಅನನ್ಯವಾಗಿದ್ದು, ಸೋನಿಯಾ ಗಾಂಧಿ ಮೇಲಿನ ನಂಬಿಕೆ, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ್ದಾರೆ'' ಎಂದರು.
ಇದೇ ವೇಳೆ, ಸರ್ಕಾರಕ್ಕೆ ಸಾರಿಗೆ ನೌಕರರ ದುಃಖ, ದುಮ್ಮಾನ, ಭಾವನೆ, ಶ್ರಮದ ಅರಿವಿಲ್ಲ. ಮುಷ್ಕರ ಮಾಡುವ ಬಗ್ಗೆ ಸಾರಿಗೆ ನೌಕರರು ಇಂದು ಹೇಳಿಲ್ಲ, ಮೊದಲೇ ಹೇಳಿ ಮುಷ್ಕರ ನಡೆಸುತ್ತಿದ್ದಾರೆ. ಸಾರಿಗೆ ನೌಕರರ ಜೊತೆಗೆ ಮಾತನಾಡಿ ಅವರ ಬೇಡಿಕೆ ಈಡೇರಿಸಬೇಕು ಎಂದು ಬೆಳಗಾವಿಯಲ್ಲಿ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
ರಾಜ್ಯದಲ್ಲಿರುವ ಸಾರಿಗೆ ಸಂಸ್ಥೆ ಸಾರ್ವಜನಿಕ ವಲಯದಾಗಿದ್ದು, ಸಾರಿಗೆ ಸಂಸ್ಥೆಯನ್ನು ಸರ್ಕಾರ ವ್ಯಾಪಾರದ ದೃಷ್ಟಿಯಿಂದ ನೋಡಬಾರದು. ಎಲ್ಲದರ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದರು.
ಸಾರಿಗೆ ಸಂಸ್ಥೆ ನೌಕರರು ಮಾಡುತ್ತಿರುವ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲ ಇದೆ. ಉಪ ಚುನಾವಣೆ ವೇಳೆ ಸಿಎಂ ಯಡಿಯೂರಪ್ಪ ಅವರು ಮರಾಠಾ ಸಮಾಜಕ್ಕೆ ಹಣ ಬಿಡುಗಡೆ ಮಾಡಿದ ವಿಚಾರ ಪ್ರಸ್ತಾಪಿಸಿ, ಮರಾಠಾ ಸಮುದಾಯ ಯಾವ ನಿಗಮವನ್ನು ಸಹ ಕೇಳಿರಲಿಲ್ಲ, ಸಿಎಂ ಬಿಎಸ್ವೈ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ನಡೆಸಿದರು.