ಮತ್ತೆ ಸಿಎಂ ಕಾಟಾಚಾರಕ್ಕೆ ಬರದಿರಲಿ; ಸತೀಶ್ ಜಾರಕಿಹೊಳಿ ಕೊಂಕು
ಬೆಳಗಾವಿ, ಅಕ್ಟೋಬರ್ 3: ಇಂದು ನೆರೆ ಪರಿಹಾರದ ವಿಷಯವಾಗಿ ಸತತ ಮೂರನೇ ಬಾರಿಗೆ ಸಿಎಂ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿಗೆ ಭೇಟಿ ನೀಡಿ, ಪ್ರವಾಹ ಸಂತ್ರಸ್ತರಿಗೆ ತಕ್ಕ ಪರಿಹಾರ ನೀಡಲಾಗುವುದು ಎಂದೂ ತಿಳಿಸಿದ್ದಾರೆ.
ಆದರೆ ಬಿಎಸ್ ವೈ ಈ ಬಾರಿಯಾದರೂ ಸೂಕ್ತವಾಗಿ ಪರಿಹಾರ ಕಲ್ಪಿಸಲಿ ಎಂದು ಆಗ್ರಹಿಸಿದ್ದಾರೆ ಸತೀಶ್ ಜಾರಕಿಹೊಳಿ. "ಬಿಎಸ್ ವೈ ಬೆಳಗಾವಿ ಜಿಲ್ಲೆ ಪ್ರವಾಸ ಕಾಟಾಚಾರಕ್ಕೆ ಆಗಬಾರದು. ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಮೂರನೇ ಬಾರಿಗೆ ನೆರೆಗಾಗಿ ಯಡಿಯೂರಪ್ಪ ಬರುತ್ತಿದಾರೆ. ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ತಕ್ಷಣವೇ ಐದು ಲಕ್ಷ ರೂಪಾಯಿ ನೀಡಬೇಕು" ಎಂದು ವ್ಯಂಗ್ಯ ಮಾಡಿದ್ದಾರೆ.
ಪರಿಹಾರ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಮೂಡಿಗೆರೆ ರೈತ
"ಮೋದಿಯವರು ಬಿಹಾರದ ಮೇಲೆ ಅನುಕಂಪ ತೋರಿಸುತ್ತಾರೆ. ಆದರೆ ಕರ್ನಾಟಕದ ಮೇಲೆ ಅವರಿಗೆ ಕಾಳಜಿ ಇಲ್ಲ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದು ಹೋದ್ರೂ ಪ್ರಯೋಜನವಾಗಲಿಲ್ಲ. ಸಂತ್ರಸ್ತರಿಗೆ ದುಡ್ಡು ಕೂಡುವ ಕೆಲಸ ಆಗಲಿಲ್ಲ. ಜನತೆ ಬಿಜೆಪಿಗೆ ಸರಿಯಾದ ಪಾಠ ಕಲಿಸ್ತಾರೆ" ಎಂದು ಹೇಳಿದ್ದಾರೆ.
ಮೋದಿಗೆ ಬೈದರೆ ಆಕಾಶಕ್ಕೆ ಉಗುಳಿದಂತೆ ಎಂದ ಸಂಸದ ಪ್ರತಾಪ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, "ಬಿಜೆಪಿಯಲ್ಲಿ ಕೆಲವರು ಜಾತಿ, ಧರ್ಮದ ಮೇಲೆ ಗೆದ್ದು ಬಂದಿದ್ದಾರೆ. ನೈಜ ವಾಸ್ತವ ಅವರಿಗೆ ಗೊತ್ತಿಲ್ಲ. ಅವರ ವಿರುದ್ಧ ಮಾತನಾಡಿದರೆ ದೇಶ ದ್ರೋಹ ಎನ್ನುತ್ತಾರೆ" ಎಂದರು.
ಮತ್ತೆ ರಮೇಶ ಜಾರಕಿಹೊಳಿ ಆಪ್ತರ ವಿರುದ್ಧ ಕಿಡಿಕಾರಿದ ಅವರು, "ನಮ್ಮ ಬೆಂಬಲಿಗರನ್ನೇ ಅವರು ಗುರಿ ಮಾಡಿಕೊಳ್ಳುತ್ತಿದ್ದಾರೆ. ನೀವು ಯಾಕೆ ಅವರ ಪರ ಹೋದ್ರಿ ಎಂದು ನಮ್ಮ ಬೆಂಬಲಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಗೋಕಾಕನಲ್ಲಿ ಭಯದ ವಾತಾವರಣ ಇದೆ. ಗೋಕಾಕನಲ್ಲಿ ಅಂಬಿರಾವ್ ಪಾಟೀಲ ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡ್ತಾರೆ. ಅಂಬಿರಾವ್ ಮುಂದೆ ನಾನು ಕೂಡಾ ಬಿಗ್ ಜೀರೋ. ಅಂಬಿರಾವ್ ಮುಂದೆ ರಮೇಶ ಜಾರಕಿಹೊಳಿ ಏನೂ ಅಲ್ಲ" ಎಂದರು.
ನೆರೆ ಪರಿಶಿಲನೆಗೆ ತೆರಳಿದ್ದಾಗ ಮುಳುಗಿದ ಬಿಜೆಪಿ ಸಂಸದರಿದ್ದ ದೋಣಿ
"20 ವರ್ಷದಲ್ಲಿ ಒಂದು ಕೆಡಿಪಿ ಸಭೆ ಮಾಡಲು ರಮೇಶ್ ಗೆ ಇನ್ನೂ ಆಗಿಲ್ಲ. ಇಲ್ಲಿಯವರೆಗೂ ಗೋಕಾಕನಲ್ಲಿ ಜಾರಕಿಹೊಳಿ ಕುಟುಂಬ ಒಂದೇ ಇತ್ತು. ಈಗ ಲಖನ್ ಜಾರಕಿಹೊಳಿ ಹೊರಗೆ ಬಂದಿದ್ದಾರೆ. ಇದರಿಂದ ಸ್ವಲ್ಪ ಜನರಿಗೆ ಧೈರ್ಯ ಬಂದಿದೆ. ಅದಕ್ಕಾಗಿ ಗೋಕಾಕ ಜನರು ನಮ್ಮೊಂದಿಗೆ ಬರುತ್ತಿದ್ದಾರೆ. ಅದಕ್ಕೆ ಆ ಜನರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಗೋಕಾಕ ಉಪ ಚುನಾವಣೆಗೆ ನಾವು ಸಿದ್ಧತೆ ನಡೆಸಿದ್ದೇವೆ. ಈಗ ಒಂದು ಹಂತದ ಸಿದ್ಧತೆಯೂ ಆಗಿದೆ. ಕಾಂಗ್ರೆಸ್ ಗೆಲ್ಲುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದರು.