ಕಥೆಯ ಕೇಳಿರಣ್ಣ... ಹಾಡಿನ ಮೂಲಕ ರಮೇಶ್ ಕಾಲೆಳೆದ ಸತೀಶ್ ಜಾರಕಿಹೊಳಿ
ಬೆಳಗಾವಿ, ಅಕ್ಟೋಬರ್ 9: ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯ, ಮುನಿಸು ಹೊಸತೇನಲ್ಲ. ಆದರೆ ಇದೀಗ ಆ ಮುನಿಸು ಹೊಸ ರೂಪ ತಾಳಿಕೊಂಡಿದೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಹಾಡು ವೈರಲ್ ಆಗಿದೆ.
"ಗೋಕಾಕ ನಾಡಿನ ನಗರ ಸಭೆಯವರು ಕೋಟಿ ಕೋಟಿ ಕೊಳ್ಳೆ ಹೊಡೆದಾರೋ ಎನ್ನುವ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತೆ ಸಿಎಂ ಕಾಟಾಚಾರಕ್ಕೆ ಬರದಿರಲಿ; ಸತೀಶ್ ಜಾರಕಿಹೊಳಿ ಕೊಂಕು
ಗೋಕಾಕ ನಗರದಲ್ಲಿ ಪ್ರವಾಹ ಅಪ್ಪಳಿಸಿ ಸಹಸ್ರಾರು ಜನ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭವನ್ನೇ ಬಳಸಿಕೊಂಡು ನಗರಸಭೆ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದೆ ಎಂದು ಈ ಹಾಡಿನಲ್ಲಿ ಆರೋಪಿಸಲಾಗಿದೆ. ಮಾಜಿ ಸಚಿವ, ಶಾಸಕ ಸತೀಶ್ ಜಾರಕಿಹೊಳಿ ಈ ವೀಡಿಯೋ ಹಾಡನ್ನು ಹೊರತಂದಿದ್ದಾರೆ.
ಜಾನಪದ ಶೈಲಿಯಲ್ಲಿ ಹಾಡನ್ನು ರಚಿಸಿ, ಅದನ್ನು ಪ್ರವಾಹ ಸಂದರ್ಭದ ಪರಿಸ್ಥಿತಿಯ ವೀಡಿಯೋದೊಂದಿಗೆ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ ಹಾಡಿಗೆ ಆರಂಭದಲ್ಲೇ ಸತೀಶ್ ಜಾರಕಿಹೊಳಿ ಅವರ ಬೈಟ್ ಕೂಡ ಜೋಡಿಸಲಾಗಿದೆ. ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಗೋಕಾಕ ಜನತೆ ಕಣ್ಣೀರು ಹಾಕುತ್ತಿದ್ದರು. ಆದರೆ ಗೋಕಾಕ್ ನಗರಸಭೆಯವರು ಜನರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇದರ ಸತ್ಯಾಂಶವನ್ನು ಹಾಡಿನ ರೂಪದಲ್ಲಿ ಕೊಟ್ಟಿದ್ದೇವೆ, ಲೈಕ್ ಆದ್ರೆ ಶೇರ್ ಮಾಡಿ ಎಂದು ಸ್ವತಃ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ಕ್ಷೇತ್ರದ ಉಪಚುನಾವಣೆ: ಕಣದಲ್ಲಿ ಅಚ್ಚರಿಯ ಹೆಸರು
ಗೋಕಾಕ ನಗರಸಭೆಯ ಭ್ರಷ್ಟಾಚಾರದ ಕರ್ಮ ಕಾಂಡ ಎಂದು ತಲೆ ಬರಹ ಕೊಟ್ಟು ವೀಡಿಯೋ ಮಾಡಲಾಗಿದೆ. ಆರಂಭದಲ್ಲೇ ಶಾಸಕ ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ್ ಮತ್ತು ನಗರಸಭೆ ಆಯುಕ್ತರ ಫೋಟೋವನ್ನೂ ಹಾಕಲಾಗಿದೆ. ಈ ಹಾಡಿನ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಇದು ಜಾರಕಿಹೊಳಿ ಸಹೋದರರ ಜಗಳದ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ.