ಸೋದರನನ್ನು ಜಾತ್ರೆ ಕೋಣಕ್ಕೆ ಹೋಲಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ, ಅಕ್ಟೋಬರ್ 18: "ಜಾತ್ರೆಯಲ್ಲಿ ಕೋಣ ಕಡಿಯವ ಮೊದಲು ಸುಣ್ಣದ ನೀರು ಕುಡಿಸುತ್ತಾರೆ. ಹೀಗೆ ನೀರು ಕುಡಿಸೋದ್ರಿಂದ ಕೋಣದ ಶಕ್ತಿ ಕಡಿಮೆಯಾಗುತ್ತದೆ. ಆದರೆ ತಪ್ಪಿ ರಮೇಶ ಜಾರಕಿಹೊಳಿಯೇ ಸುಣ್ಣದ ನೀರು ಕುಡಿದಿದ್ದಾನೆ. ಕ್ಷೇತ್ರದ ಜನರಿಗೆ ಈಗ ಒಳ್ಳೆಯ ಅವಕಾಶ ಸಿಕ್ಕಿದೆ. ಇದು ಶಾಸಕರನ್ನು ಬದಲಾಯಿಸಲು ಒಳ್ಳೆ ಸಮಯ. ಗೋಕಾಕ್ ಕ್ಷೇತ್ರದ ಜನ ಈ ಅವಕಾಶ ಬಳಸಿಕೊಂಡು ಸೋಲಿಸಬೇಕು" ಎಂದು ತಮ್ಮ ಸಹೋದರ ರಮೇಶ್ ಜಾರಕಿಹೊಳಿಯನ್ನು ಕೋಣಕ್ಕೆ ಹೋಲಿಸಿ ಮಾತಾಡಿದ್ದಾರೆ ಶಾಸಕ ಸತೀಶ ಜಾರಕಿಹೊಳಿ.
ಕಥೆಯ ಕೇಳಿರಣ್ಣ... ಹಾಡಿನ ಮೂಲಕ ರಮೇಶ್ ಕಾಲೆಳೆದ ಸತೀಶ್ ಜಾರಕಿಹೊಳಿ
ರಾಜಕಾರಣಿಗಳು ಜನ ಸೇವೆ ಮಾಡಲು ಬರುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಸಾಲ ತೀರಿಸಲು ಬಿಜೆಪಿ ಸೇರಿದ್ದಾನೆ. ಸಾಲ ತೀರಿಸಿ ನಾನು ಮತ್ತೆ ಕಾಂಗ್ರೆಸ್ ಬರುತ್ತೇನೆ ಎಂದು ಹೇಳಿದ್ದಾನೆ. ಇದನ್ನು ನಾನು ಹೇಳುತ್ತಿಲ್ಲ, ಒಂದು ವರ್ಷದಿಂದ ಇಡೀ ಬೆಂಗಳೂರು ತುಂಬ ರಮೇಶ ಜಾರಕಿಹೊಳಿ ಹೇಳಿಕೊಂಡು ಬಂದಿದ್ದಾನೆ. ರಮೇಶ್ ಜಾರಕಿಹೊಳಿ ಮತ್ತು ಅಳಿಯ ಇಬ್ಬರೂ ದುಡ್ಡು ಮಾಡೋಕೆ ರಾಜಕೀಯ ಮಾಡ್ತಿದ್ದಾರೆ. ಇನ್ನು 3-4 ವರ್ಷದ ನಂತರ ಯಾರು ಎಲ್ಲಿರುತ್ತಾರೆ, ಏನ್ ಮಾಡ್ತಾರೆ ಯಾರಿಗೆ ಗೊತ್ತು. ಇದೆಲ್ಲ ನಾನು ಹೇಳಿದಲ್ಲ, ಸ್ವತಃ ರಮೇಶ ಜಾರಕಿಹೊಳಿ ಹೇಳಿದ್ದು" ಎಂದು ವ್ಯಂಗ್ಯ ಮಾಡಿದ್ದಾರೆ.
ಕೃಷ್ಣ ನದಿಯಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, "ಕೇವಲ ಚುನಾವಣೆಗಾಗಿ ಸಿಎಂ ಈ ರೀತಿ ಹೇಳಿಕೆ ನೀಡಿದ್ದಾರೆ. ಮೊದಲು ನಮಗೆ ಮಹಾರಾಷ್ಟ್ರದಿಂದ ನೀರು ಬರಬೇಕು, ನಂತರ ಅವರಿಗೆ ನೀರು ಕೊಡುವ ಬಗ್ಗೆ ಯೋಚಿಸಲಿ. ಮೊದಲು ನಮಗೆ ನ್ಯಾಯ ಸಿಗಲಿ" ಎಂದಿದ್ದಾರೆ.