ಪ್ರಚೋದಿಸುವ ಕಿಡಿಗೇಡಿಗಳಿಗೆ ಬೆಳಗಾವಿ ಪೊಲೀಸ್ ಆಯುಕ್ತ ಖಡಕ್ ಎಚ್ಚರಿಕೆ
ಬೆಳಗಾವಿ, ಆಗಸ್ಟ್ 31: ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಳಗಾವಿ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ನಗರದ ಹೊರವಲಯದ ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರುಸ್ಥಾಪನೆ ವಿವಾದ ಸುಖಾಂತ್ಯಗೊಂಡಿದೆ. ಪೀರನವಾಡಿ ಗ್ರಾಮದಲ್ಲಿ ಎರಡು ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ, ಸಂಧಾನ ಮಾಡಲಾಗಿದೆ.
ರಾಯಣ್ಣ ಪುತ್ಥಳಿ ವಿವಾದ ಸುಖಾಂತ್ಯ; ಬೆಳಗಾವಿಯಲ್ಲಿ ಈಶ್ವರಪ್ಪ ಹೇಳಿದ್ದೇನು?
ಸ್ಥಳೀಯರು ಸಭೆಯ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದು, ಅನೋನ್ಯವಾಗಿ ಇದ್ದಾರೆ. ಆದರೆ, ಪ್ರಕರಣ ಸಂಬಂಧ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಮಹಾಪುರುಷರ ಬಗ್ಗೆ ಪೋಸ್ಟ್ ಮಾಡುವ ಪೇಜ್ ಅಡ್ಮಿನ್ ಹಾಗೂ ಕಮೆಂಟ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರುಸ್ಥಾಪನೆ ವಿವಾದ ಅಂತ್ಯಗೊಂಡಿದೆ. ಹೀಗಾಗಿ ಪೀರನವಾಡಿಗಿಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಭೇಟಿ ನೀಡಲಿದ್ದಾರೆ. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಲಿದ್ದಾರೆ. ಇದಕ್ಕೂ ಮೊದಲು ಚೆನ್ನಮ್ಮ ವೃತ್ತದಲ್ಲಿರುವ ರಾಣಿ ಚೆನ್ನಮ್ಮ ಪುತ್ಥಳಿಗೆ ಪುಷ್ಪಾರ್ಪಣೆ ಸಲ್ಲಿಸಲಿದ್ದಾರೆ.