ಪಟ್ಟಕ್ಕಾಗಿ 'ಸಾಹುಕಾರ್' ಲಾಬಿ: ಫಡ್ನವೀಸ್ರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ
ಬೆಳಗಾವಿ, ಫೆಬ್ರವರಿ 03: ಸಿಡಿ ವಿಚಾರವಾಗಿ ಸಚಿವ ಸ್ಥಾನ ಕಳೆದುಕೊಂಡ ಬೆಳಗಾವಿಯ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೋವಾಕ್ಕೆ ತೆರಳಿ ಅಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ. ರಮೇಶ್ ಹಾಗೂ ದೇವೇಂದ್ರ ಫಡ್ನವೀಸ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.
ರಮೇಶ್ ಪಟ್ಟಕ್ಕಾಗಿ ಲಾಬಿ ಶುರು ಮಾಡಿದ್ದಾರೆನ್ನುವ ಅನುಮಾನ ಮೂಡಿದೆ. ರಮೇಶ್ ಜಾರಕಿಹೊಳಿ ಸಚಿವ ಸಂಪುಟಕ್ಕೆ ಸೇರುವ ಪಣ ತೊಟ್ಟಿದ್ದಾರೆ. ಹೀಗಾಗಿ ಫಡ್ನವೀಸ್ ಮೂಲಕ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಭೇಟಿ ವೇಳೆ ಎರಡು ವಿಚಾರದ ಬಗ್ಗೆ ರಮೇಶ್ ಫಡ್ನವೀಸ್ ಅವರೊಂದಿಗೆ ಚರ್ಚಿಸಿರಬಹುದು ಎನ್ನಲಾಗುತ್ತಿದೆ. ಒಂದು ಸಿಡಿ ವಿಚಾರ ಮತ್ತೊಂದು ಸಚಿವ ಸ್ಥಾನದ ಬಗ್ಗೆ ಚರ್ಚೆಯಾಗಿರಬಹುದು ಎಂದು ಊಹಿಸಲಾಗಿದೆ.
ರಮೇಶ್ ಜಾರಕಿಹೊಳಿ ಸಿಡಿ ಕೇಸ್: SIT ತನಿಖಾ ವರದಿ ಸಲ್ಲಿಕೆಗೆ HC ಅನುಮತಿ
ಇನ್ನೂ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ಮೇಲೆ ಕೇಳಿಬರುತ್ತಿರುವ ಲೈಂಗಿಕ ಕಿರುಕುಳ ಆರೋಪದ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಅಂತಿಮ ವರದಿಯನ್ನು ಸಲ್ಲಿಸಲು ವಿಶೇಷ ತನಿಖಾ ತಂಡ(SIT)ಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಕೇಸು ದಾಖಲಾಗಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದ್ದು, ಅರ್ಜಿದಾರರು ಎತ್ತಿರುವ ಪ್ರಶ್ನೆಗಳನ್ನು ಮುಕ್ತವಾಗಿರಿಸಲಾಗಿದೆ. ಅಂತಿಮ ವರದಿ ಸಲ್ಲಿಕೆಗೆ ಎಸ್ಐಟಿ ಅವಕಾಶ ಕೋರಿತ್ತು. ಸದ್ಯ ಎಸ್ಐಟಿ ತನಿಖೆ ಪ್ರಶ್ನಿಸಿರುವ ಯುವತಿಯ ಅರ್ಜಿ ಬಗ್ಗೆ ಇಂದು ವಿಚಾರಣೆ ನಡಿಸಿದ ಕೋರ್ಟ್ ತನಿಖಾ ವರದಿ ಸಲ್ಲಿಸಲು ತಿಳಿಸಿದೆ. ಇದೀಗ ಎಸ್ಐಟಿ ಸಲ್ಲಿಸುವ ಅಂತಿಮ ವರದಿ ಮೇಲೆ ರಮೇಶ್ ಜಾರಕಿಹೊಳಿ ಭವಿಷ್ಯ ನಿಂತಿದೆ. ಲೈಂಗಿಕ ಕಿರುಕುಳದ ಸಿಡಿ ಬಹಿರಂಗವಾದ ಹಿನ್ನೆಲೆಯಲ್ಲಿ ಕಳೆದ ವರ್ಷ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸದ್ಯದಲ್ಲೇ ಅವರ ಭವಿಷ್ಯ ತೀರ್ಮಾನವಾಗಲಿದೆ. ಇದೀಗ ತನಿಖೆ ಮುಕ್ತಾಯವಾಗಿದ್ದು, ವರದಿ ಸಲ್ಲಿಕೆಯಾಗಲಿದೆ. ಪೊಲೀಸರ ಅಂತಿಮ ವರದಿಯಲ್ಲಿ ರಮೇಶ್ ಜಾರಕಿಹೊಳಿ ಭವಿಷ್ಯ ಇದೆ. ಯುವತಿಯ ಆರೋಪ ಸಾಬೀತಾಗದಿದ್ದರೆ ಬಿ ರಿಪೋರ್ಟ್ ಸಲ್ಲಿಕೆಯಾಗುತ್ತದೆ. ಬಿ ರಿಪೋರ್ಟ್ ಸಲ್ಲಿಸಿದರೆ ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗುತ್ತಾರೆ. ಚಾರ್ಜ್ಶೀಟ್ ಸಲ್ಲಿಸಿದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸದ್ಯಕ್ಕೆ ಅಂತಿಮ ವರದಿಯು ರಮೇಶ್ ಭವಿಷ್ಯವನ್ನು ತೀರ್ಮಾನಿಸುತ್ತದೆ.
ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ತೊರೆದು ಬಿಜೆಪಿ ಅತೃಪ್ತ ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಒಬ್ಬರು. ಅತೃಪ್ತ ಶಾಸಕರಿಂದಾಗಿ ಆಡಳಿತದಲ್ಲಿದ್ದ ಮೈತ್ರಿ ಸರ್ಕಾರ ಅಧಿಕಾರದ ಕುರ್ಚಿ ಬಿಡಬೇಕಾಯಿತು. ರಮೇಶ್ ಜಾರಕಿಹೊಳಿ ಹಾಗು ತಂಡದ ಮನವೊಲಿಸಲು ಅದೆಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ. ಡಿಕೆ ಶಿವಕುಮಾರ್ ಅತೃಪ್ತ ಶಾಸಕರು ತಂಗಿದ್ದ ಹೋಟೆಲ್ ಮುಂದೆ ಗಂಟೆಗಟ್ಟಲೆ ಕಾದರೂ ಅವರನ್ನು ಒಳಪ್ರವೇಶಕ್ಕೆ ಅವಕಾಶವೇ ಸಿಗಲಿಲ್ಲ. ಕಾಂಗ್ರೆಸ್ ಯಾವುದೇ ಪ್ರಯತ್ನಪಟ್ಟರೂ ಅತೃಪ್ತ ಶಾಸಕರು ಕಮಲ ಸೇರಿದರು.
ಹೀಗಾಗಿ ಇವರ ವಿರುದ್ಧ ಸಂಚು ರೂಪಿಸಿ ಸಿಡಿ ಮಾಡಲಾಗಿದೆ ಎಂದು ಆರೋಗಳು ಕೇಳಿ ಬಂದಿದ್ದವು. ಅದೇನೇ ಇರಲಿ ಸದ್ಯ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನಕ್ಕಾಗಿ ಪಣ ತೊಟ್ಟಿದ್ದಾರೆ. ಒಂದು ವೇಳೆ ಜಾರಕಿಹೊಳಿ ಅಪರಾಧಿಯಾದರೆ ಸಚಿವ ಸ್ಥಾನ ಕೈತಪ್ಪುವುದರಲ್ಲಿ ಅನುಮಾನವೇ ಇಲ್ಲ ಎಂದು ಮೂಲಗಳು ಹೇಳುತ್ತವೆ. ಆದರೆ ನಿರಪರಾಧಿಯಾದರೆ ಮತ್ತೆ ಸಚಿವ ಸ್ಥಾನಕ್ಕೆ ಒತ್ತಡ ಹೇರುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಅವರು ಸಾಕಷ್ಟು ಕಸರತ್ತನ್ನು ಮಾಡುತ್ತಿದ್ದಾರೆ.