ಸಂಗೊಳ್ಳಿ ಗ್ರಾಮದ ಅಭಿವೃದ್ದಿಗೆ 75ಲಕ್ಷ ಅನುದಾನ: ಸಿದ್ದು
ಬೆಳಗಾವಿ, ಜನವರಿ 28: ಸಂಗೊಳ್ಳಿ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಗ್ರಾಮದ ಅಭಿವೃದ್ಧಿಗೆ ಮಾರ್ಚ್ ಅಂತ್ಯದ ಒಳಗೆ ರು.75 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಏರ್ಪಡಿಸಲಾದ ಸಂಗೊಳ್ಳಿ ರಾಯಣ್ಣ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಶ್ರಮಿಸಿದ ದಿನವನ್ನು ನಾನು ಸ್ಮರಿಸುತ್ತಿದ್ದು ಅದರ ಅಂಗವಾಗಿ ಸಂಗೊಳ್ಳಿ ಗ್ರಾಮ ಅಭಿವೃದ್ಧಿಗೆ ಮಾರ್ಚ್ ಅಂತ್ಯ ಒಳಗೆ ರು.75 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು. ರಾಯಣ್ಣ ವೀರ ಮರಣವನ್ನಪಿದ ಖಾನಾಪುರದ ನಂದಗಡದಲ್ಲಿ ಆಧುನಿಕ ತಂತ್ರಜ್ಞಾನದ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಲಾಗುವುದು ಎಂದರು.[ಧೈರ್ಯದಿಂದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸಿ]
ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಶೌರ್ಯ ಅಕಾಡೆಮಿ ಸ್ಥಾಪನೆ ಮಾಡಲಿದ್ದು, ನಂದಗಡವನ್ನು ಯಾತ್ರಾ ಸ್ಥಳವನ್ನಾಗಿಸಲಾಗುವುದು ಎಂದು ತಿಳಿಸಿದರು.
ರಾಯಣ್ಣ ಸ್ಮಾರಕ ಉದ್ಯಾನ ನಿರ್ಮಾಣ
ರಾಯಣ್ಣನನ್ನು ನೇಣುಗಂಬಕ್ಕೇರಿಸಲಾದ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ೧೨.೩೦ ಎಕರೆ ಜಾಗೆಯಲ್ಲಿ ಆಧುನಿಕ ತಂತ್ರಜ್ಜಾನದ ವಸ್ತುಸಂಗ್ರಹಾಲಯ ಸ್ಥಾಪನೆ ಮಾಡಲಾಗುವುದು ಮತ್ತು ನಂದಗಡದಲ್ಲಿ ರಾಯಣ್ಣ ಸ್ಮಾರಕ ಉದ್ಯಾನ ನಿರ್ಮಾಣ ಮಾಡಲಾಗುವದು ಎಂದು ಮುಖ್ಯಮಂತ್ರಿಗಳು ಹೇಳಿದರು.
ರಾಯಣ್ಣ ಶೌರ್ಯ ಅಕಾಡೆಮಿ
ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸೆರೆ ಸಿಕ್ಕ ಕೆರೆಯನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಸಂಗೊಳ್ಳಿಯಲ್ಲಿ ನೂರು ಎಕರೆ ಜಾಗೆಯಲ್ಲಿ ಸೈನಿಕ ಶಾಲೆ ಮಾದರಿಯಲ್ಲಿ ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ ಸ್ಥಾಪನೆ ಮಾಡಲಾಗುವುದೆಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು.
ನಂದಗಡ- ಯಾತ್ರಾ ಸ್ಥಳ
ದೇಶಪ್ರೇಮಕ್ಕೆ ಉದಾಹರಣೆಯಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣುಗಂಬಕ್ಕೆ ಏರಿಸಿದ ನಂದಗಡವನ್ನು ಯಾತ್ರಾ ಸ್ಥಳವನ್ನಾಗಿ ಸರ್ಕಾರ ಅಭಿವೃದ್ಧಿಪಡಿಸಲಿದೆ. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಶಾಶ್ವತ ಪ್ರಾಧಿಕಾರ ಆಗಿದ್ದು, ಈ ಪ್ರಾಧಿಕಾರದ ವತಿಯಿಂದ ಸಂಗೊಳ್ಳಿ ಹಾಗೂ ನಂದಗಡ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳನ್ನು ಕೂಡ ಅಭಿವೃದ್ಧಿಪಡಿಸಲಾಗುವುದು ಮುಖ್ಯಮಂತ್ರಿಗಳು ತಿಳಿಸಿದರು.
102 ಬಸ್ಗಳಿಗೆ ಚಾಲನೆ
ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ ಆಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ 102 ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಈ 102 ವಾಹನಗಳಿಗೆ ರು. 24 ಕೋಟಿ ಖರ್ಚು ತಗಲಿದ್ದು ಈಗಾಗಲೇ ಸುಮಾರು 300 ವಾಹನಗಳನ್ನು ಗಸ್ತು ತಿರುಗುವ ಪೊಲೀಸರಿಗೆ ನೀಡಲಾಗಿದೆ ಎಂದರು.