ಈ ಸಮಯವೇ ಸರ್ಕಾರಕ್ಕೆ ಸವಾಲಿನ ಪ್ರಶ್ನೆ; ಆರ್ ಅಶೋಕ್
ಬೆಳಗಾವಿ, ಅಕ್ಟೋಬರ್ 19: ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕಲಬುರಗಿ ಜಿಲ್ಲೆಯಲ್ಲಿ ಅಕ್ಟೋಬರ್ 16ರಂದು ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ್ದ ಕಂದಾಯ ಸಚಿವ ಆರ್. ಅಶೋಕ್, ಇಂದು ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದಾರೆ.
ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಮಳೆಯಿಂದ ಈವರೆಗೂ 3000 ಕೋಟಿಗೂ ಅಧಿಕ ಹಾನಿಯಾಗಿದೆ. ಈವರೆಗೂ ಪ್ರವಾಹದಿಂದ ವಿವಿಧ ಜಿಲ್ಲೆಗಳಲ್ಲಿ 10 ಜನರ ಸಾವು ಸಂಭವಿಸಿದೆ. 500ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಮಾಹಿತಿ ನೀಡಿದರು. ಈಗಾಗಲೇ ಕಾಳಜಿ ಕೇಂದ್ರಗಳಲ್ಲಿ 8 ಸಾವಿರ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದೂ ತಿಳಿಸಿದರು.
ಕೊರೊನಾ, ಪ್ರವಾಹ ಸರ್ಕಾರಕ್ಕೆ ಸವಾಲಿನ ಪ್ರಶ್ನೆ
ಕೊರೊನಾ ಹಾಗೂ ಪ್ರವಾಹ ಈ ಎರಡೂ ಪರಿಸ್ಥಿತಿಗಳನ್ನು ನಿಭಾಯಿಸುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಇದನ್ನು ಮೆಟ್ಟಿ ನಿಂತು ಹೊರಗೆ ಬರುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಬೆಳಗಾವಿ ಜಿಲ್ಲಾಧಿಕಾರಿ ಅಕೌಂಟ್ ನಲ್ಲಿ 88 ಕೋಟಿ ರೂ. ಹಣ ಇದೆ. ಕಲಬುರಗಿಯಲ್ಲಿ 20 ಕೋಟಿ, ಯಾದಗಿರಿಯಲ್ಲಿ 16 ಕೋಟಿ, ಬಾಗಲಕೋಟೆಯಲ್ಲಿ 33 ಕೋಟಿ ಹಣ ಇದೆ.5 ಕೋಟಿಗೂ ಕಡಿಮೆ ಹಣ ಇರುವ ಜಿಲ್ಲೆಯಲ್ಲಿ ನಾವೇ ಹಣ ಕೊಡುತ್ತೇವೆ. 666 ಕೋಟಿ ರೂಪಾಯಿ ಹಣ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ ಎಂದು ಹೇಳಿದರು.
10 ನಿಮಿಷಕ್ಕೆ ಸೀಮಿತವಾಯ್ತು ಕಂದಾಯ ಸಚಿವರ ಪ್ರವಾಹ ಪೀಡಿತ ಪ್ರದೇಶಗಳ ಭೇಟಿ
"ಕಾಳಜಿ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆಗೆ ಯೋಜನೆ"
ಇಂದು ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಆರ್ ಅಶೋಕ್ ಪ್ರವಾಸ ಮಾಡಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಪ್ರವಾಹದಲ್ಲಿ ನಲುಗಿದವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಯಾವುದೇ ರೀತಿ ಹಣದ ಕೊರತೆ ಬರದಂತೆ ಪರಿಹಾರ ಕಾರ್ಯ ಚುರುಕುಗೊಳಿಸುತ್ತೇವೆ. ಯಾವುದೇ ಕಾರಣಕ್ಕೂ ಸೋಮಾರಿತನ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾಳಜಿ ಕೇಂದ್ರಗಳಿಗೆ ಸರಿಯಾದ ಊಟದ ವ್ಯವಸ್ಥೆ ಮಾಡಬೇಕು. ಕಾಳಜಿ ಕೇಂದ್ರಗಳಲ್ಲಿ ಯಾವ ರೀತಿಯ ಊಟ ಕೊಡಬೇಕೆಂದು ಮಾನದಂಡ ನೀಡಿದ್ದೇನೆ. ಕಲಬುರಗಿಯ ಕೆಲವೆಡೆ ಕಾಳಜಿ ಕೇಂದ್ರದಲ್ಲಿ ಜಾತಿ ತಾರತಮ್ಯ ಮಾಡುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆ ರೀತಿ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಅಧಿಕಾರಿಗಳಿಗೆ ಅಶೋಕ್ ಎಚ್ಚರಿಕೆ
ಕಾಳಜಿ ಕೇಂದ್ರದಲ್ಲಿ ಒಳ್ಳೆಯ ಪೌಷ್ಟಿಕ ಆಹಾರ ಕೊಡಬೇಕು. ಇದನ್ನು ಉಲ್ಲಂಘಿಸಿದ ಅಧಿಕಾರಿಗಳನ್ನು ಮನೆಗೆ ಕಳುಹಿಸಿ ಕೊಡುತ್ತೇವೆ ಎಂದೂ ಎಚ್ಚರಿಕೆ ನೀಡಿದರು. ರಾಯಬಾಗ ತಹಶೀಲ್ದಾರ್ ವಿರುದ್ಧ ಕೋವಿಡ್ ನಿರ್ವಹಣೆ ಹಣ ದುರುಪಯೋಗ ಆರೋಪ ವಿಚಾರದ ಬಗ್ಎಗ ಪ್ರತಿಕ್ರಿಯಿಸಿ, ಕೋವಿಡ್ ಹಣ ಅವ್ಯವಹಾರ ಮಾಡೋದು ದೇವರಿಗೆ ಮೋಸ ಮಾಡಿದಂತೆ. ಅಂಥವರು ಯಾರೇ ಇದ್ರೂ ಒಂದು ನಿಮಿಷವೂ ಕೆಲಸದಲ್ಲಿ ಇರಲು ನಾಲಾಯಕ್. ಜಿಲ್ಲಾಧಿಕಾರಿಗಳ ಬಳಿ ವರದಿ ಪಡೆದು ಅಮಾನತು ಮಾಡಲು ಹೇಳುತ್ತೇನೆ ಎಂದು ಗರಂ ಆದರು.
ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ತುರ್ತು ವಿಡಿಯೋ ಕಾನ್ಫರೆನ್ಸ್!
"ಕಾಂಗ್ರೆಸ್ಗೆ ಬೂತ್ ಏಜೆಂಟರನ್ನೂ ಹುಡುಕಲು ಕಷ್ಟ ಆಗುತ್ತದೆ"
ಆರ್.ಆರ್.ನಗರ ಉಪಚುನಾವಣೆಗೆ ಬಿಜೆಪಿ ಉಸ್ತುವಾರಿ ನಾನೇ ಇದ್ದೀನಿ. ಆರ್.ಆರ್.ನಗರದ 9 ವಾರ್ಡ್ ಗಳಲ್ಲಿನ ಎಲ್ಲಾ ಕಾರ್ಪೊರೇಟರ್ ಬಿಜೆಪಿ ಸೇರಿದ್ದಾರೆ. ಬೂತ್ ಏಜೆಂಟ್ಗೂ ಹುಡುಕಾಡುವ ಪರಿಸ್ಥಿತಿ ಕಾಂಗ್ರೆಸ್ಗೆ ಬರುತ್ತೆ. ನಾನು ಅಲ್ಲಿ ಮೂರು ಬಾರಿ ಎಂಎಲ್ ಎ ಆಗಿ ಗೆದ್ದಿದ್ದೇನೆ. ಸ್ವತಃ ಕಾಂಗ್ರೆಸ್ ಅಧ್ಯಕ್ಷರು ಫೀಲ್ಡ್ಗಿಳಿದರೂ ಕಾರ್ಯಕರ್ತರು ಕೈಗೆ ಸಿಗುತ್ತಿಲ್ಲ. ಇನ್ನು ಸ್ವಲ್ಪ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಜೆಪಿ ಸೇರುತ್ತಿದ್ದಾರೆ. 40 ರಿಂದ 50 ಸಾವಿರ ಲೀಡ್ ನಲ್ಲಿ ನಾವು ಗೆಲ್ಲುತ್ತೇವೆ. ಶಿರಾದಲ್ಲಿಯೂ ನಾವು ದೊಡ್ಡ ಅಂತರದಲ್ಲಿ ನಾವು ಗೆಲ್ಲುತ್ತೇವೆ. ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದರು.