ಸಾಂಬ್ರಾ ಜಿ.ಪಂ ಸದಸ್ಯ ರಾಜೀನಾಮೆ: ಶಾಸಕಿ ಹೆಬ್ಬಾಳ್ಕರ್ಗೆ ಶಾಕ್ ಕೊಟ್ಟ ಜಾರಕಿಹೊಳಿ
ಬೆಳಗಾವಿ, ನವೆಂಬರ್ 29: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಬೇಕೆಂದು ಪಣ ತೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸ್ಥಳೀಯ ಮಟ್ಟದಲ್ಲೂ ಆಪರೇಶನ್ ಕಮಲ ಆರಂಭಿಸಿದ್ದಾರೆ.
ಸಾಂಬ್ರಾ ಜಿ.ಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣ ಅನಗೋಳಕರ ಇಂದು ಜಿ.ಪಂ ಸದಸ್ಯ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅದ್ಧೂರಿಯಾಗಿ ನೆರವೇರಿದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಮದುವೆ
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೃಷ್ಣ ಅನಗೋಳಕರ, ನನ್ನ ಸೇರಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಸದಸ್ಯರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗುವ ತೀರ್ಮಾನ ಕೈಗೊಂಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಶೀರ್ವಾದವೂ ನಮ್ಮ ಮೇಲಿದೆ. ಆದಷ್ಟು ಬೇಗನೆ ನಾವು ಬಿಜೆಪಿ ಸೇರುತ್ತೇವೆ ಎಂದಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನನ್ನ ಜತೆ ಬಿಜೆಪಿ ಸೇರಲಿದ್ದಾರೆ. ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಿರ್ದೇಶಕರಾಗಿ ಇತ್ತೀಚೆಗಷ್ಟೇ ಆಯ್ಕೆ ಆಗಿರುವ ಕೃಷ್ಣ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸದ್ದಿಲ್ಲದೆ ಆಪರೇಷನ್ ಕಮಲ ಶುರುವಾಗಿದೆ. ವಿಶೇಷ ಅಂದರೆ ಕೃಷ್ಣ ಅನಗೋಳಕರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಅತ್ಯಾಪ್ತರಾಗಿದ್ದಾರೆ. ಇದೀಗ ಸಚಿವ ರಮೇಶ್ ಜಾರಕಿಹೊಳಿ ಅವರ ನಡೆ ಹೆಬ್ಬಾಳ್ಕರ್ಗೆ ಶಾಕ್ ಕೊಡುವ ಜೊತೆಗೆ, ಸಹೋದರ ಸತೀಶ್ ಅವರನ್ನು ಮುಜುಗರಕ್ಕೆ ಒಳಗಾಗಿಸುವಂತೆ ಮಾಡಿದೆ.