ಸಹಕಾರಿ ಬ್ಯಾಂಕ್ ಆರ್ಬಿಐ ವ್ಯಾಪ್ತಿಗೆ: ಕೇಂದ್ರದ ನಿರ್ಧಾರಕ್ಕೆ ಸೈ ಎಂದ ರಮೇಶ್ ಕತ್ತಿ
ಬೆಳಗಾವಿ, ಜೂನ್ 25: ದೇಶದಲ್ಲಿನ ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ನಿಯಂತ್ರಣಕ್ಕೆ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಹಕಾರಿ ಧುರೀಣ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ರಮೇಶ ಕತ್ತಿ ಸ್ವಾಗತಿಸಿದ್ದಾರೆ.
ಬುಧವಾರವಷ್ಟೆ ಕೇಂದ್ರ ಸಚಿವ ಸಂಪುಟ ಕೈಗೊಂಡ ಈ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ""ತಾವು ಸಂಸದರಾಗಿದ್ದಾಗ ಈ ವಿಷಯವನ್ನು ಪಾರ್ಲಿಮೆಂಟ್ ನಲ್ಲಿ ಮಾತನಾಡಿ ಸರಕಾರಿ ಬ್ಯಾಂಕುಗಳನ್ನು ಆರ್ಬಿಐ ನಿಯಂತ್ರಣಕ್ಕೆ ತರಬೇಕು ಎಂದು ಒತ್ತಾಯಿಸಿದ್ದಾಗಿ'' ಹೇಳಿದರು.
ಕೊರೊನಾ ಸಂಕಷ್ಟದ ನಡುವೆ ಸಿಎಂ ಆಸೆ ವ್ಯಕ್ತಪಡಿಸಿದ ಉಮೇಶ್ ಕತ್ತಿ
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸಹಕಾರಿ ಬ್ಯಾಂಕುಗಳಲ್ಲಿ ಇರುವ ಸದಸ್ಯರ ಠೇವಣಿ ಹಣಕ್ಕೆ ಸುರಕ್ಷತೆ ಸಿಕ್ಕಂತಾಗುತ್ತದೆ, ಸಹಕಾರಿ ಬ್ಯಾಂಕ್ ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ, ಈ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕುಗಳು ಹಾಗೂ ಬಹುರಾಜ್ಯ ಸಹಕಾರಿ ಬ್ಯಾಂಕುಗಳ ನಿಯಂತ್ರಣಕ್ಕಾಗಿ ಬ್ಯಾಂಕ್ ಗಳ ಸದಸ್ಯರ ಹಿತಾಸಕ್ತಿಯ ದೃಷ್ಟಿಯಿಂದ ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ನಿಯಂತ್ರಣಕ್ಕೆ ತರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿಯು ಅತ್ಯಂತ ಯೋಗ್ಯವಾಗಿದೆ ಎಂದರು .
1904 ರಿಂದ 1969 ರ ವರೆಗೆ ದೇಶದ ಸಂಪೂರ್ಣ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸಿದ್ದೇ ಸಹಕಾರಿ ಕ್ಷೇತ್ರ, ಸಾಮಾನ್ಯರಿಗೆ ಆರ್ಥಿಕ ಅನುಕೂಲತೆಗಳನ್ನು ಒದಗಿಸಿದ್ದು ಸಹಕಾರಿ ಕ್ಷೇತ್ರ. 1941 ರಲ್ಲಿ ದೇಶವನ್ನಾಳುತ್ತಿದ್ದ ಈಸ್ಟ್ ಇಂಡಿಯಾ ಕಂಪನಿ ಇಂಪೀರಿಯಲ್ ಬ್ಯಾಂಕ್ ಹೆಸರಿನ ರಾಷ್ಟ್ರೀಕೃತ ಬ್ಯಾಂಕ್ ಒಂದನ್ನು ಸ್ಥಾಪಿಸಿತು ಎಂದರು.
ಬೆಳಗಾವಿ; ಕೊನೆ ಕ್ಷಣದಲ್ಲಿ sslc ಪರೀಕ್ಷಾ ಕೇಂದ್ರದ ಬದಲಾವಣೆ
ಆದರೆ ಅದು ಸರ್ಕಾರಿ ನೌಕರರ ಸಂಬಳವನ್ನು ಬಟವಾಡೆ ಮಾಡುವುದಕ್ಕೆ ಮಾತ್ರ ಉಪಯೋಗಿಸಲ್ಪಟ್ಟಿತೇ ಹೊರತು ಸಾಮಾನ್ಯ ಜನರ ಆರ್ಥಿಕ ಅನುಕೂಲತೆಗಳನ್ನು ಒದಗಿಸಲು ಅಲ್ಲ ಎಂದು ವಿವರಿಸಿದರಲ್ಲದೆ ಇ೦ದಿಗೂ ಸಹಕಾರಿ ಕ್ಷೇತ್ರದ ಮೂಲಕ ಹತ್ತು ಹಲವು ಚಟುವಟಿಕೆಗಳನ್ನು ನಡೆಸುತ್ತ ಎಲ್ಲ ಸಾಮಾನ್ಯರಿಗೆ ಹೆಚ್ಚಿನ ಅನುಕೂಲತೆಗಳನ್ನು ಒದಗಿಸುತ್ತಾ ಬಂದಿದೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ತಿಳಿಸಿದರು.
ಹಲವು ರಾಜ್ಯಗಳಲ್ಲಿ ನಡೆದ ಹಲವು ದೊಡ್ಡ ಸಹಕಾರಿ ಬ್ಯಾಂಕುಗಳ ಹಗರಣಗಳ ನಂತರ ಆ ಸಹಕಾರಿ ಬ್ಯಾಂಕುಗಳಲ್ಲಿ ಇರುವ ಸಾರ್ವಜನಿಕರ ಮತ್ತು ಆ ಬ್ಯಾಂಕುಗಳ ಸದಸ್ಯರ ಠೇವಣಿಗೆ ಭದ್ರತೆ ಇಲ್ಲದಂತಾಯಿತು. ರಾಷ್ಟ್ರೀಕೃತ ಬ್ಯಾಂಕ್, ಶೆಡ್ಯೂಲ್ಡ್ ಬ್ಯಾಂಕ್ ಗಳು ಹಾನಿಗೀಡಾದರೆ ಆ ಬ್ಯಾಂಕುಗಳಿಗೆ ಸರಕಾರ ಹಣ ಕೊಡುತ್ತದೆ, ಆ ಬ್ಯಾಂಕುಗಳಲ್ಲಿ ಇರುವ ಸಾರ್ವಜನಿಕರ ಠೇವಣಿಗೆ ಭದ್ರತೆ ಒದಗಿಸುತ್ತದೆ, ಅವರ ಠೇವಣಿಯನ್ನು ಹಿಂದಿರುಗಿಸುತ್ತದೆ ಎಂದು ಹೇಳಿದರು.
ಆದರೆ ಸಹಕಾರಿ ಬ್ಯಾಂಕುಗಳಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯವರು ಹಣ ದುರುಪಯೋಗ ಮಾಡಿಕೊಂಡು, ಬ್ಯಾಂಕ್ ಗಳು ಹಾನಿಗೆ ಒಳಗಾದರೆ ಅದರ ನಷ್ಟದ ಹೊಣೆ, ಜವಾಬ್ದಾರಿ ಸದಸ್ಯರ ಮೇಲೆ ಬೀಳುತ್ತಿತ್ತು. ಹೀಗಾಗಿ ಸರ್ಕಾರ ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ವ್ಯಾಪ್ತಿಗೆ ಒಳಪಡಿಸಿದ್ದು, ಇಂದಿನ ದಿನಕ್ಕೆ ಮತ್ತು ವಾತಾವರಣಕ್ಕೆ ಅತ್ಯಂತ ಸೂಕ್ತ ಮತ್ತು ಯೋಗ್ಯವಾಗಿದೆ ಅಷ್ಟೇ ಅಲ್ಲದೆ ಇನ್ನು ಮುಂದೆ ಸಹಕಾರಿ ಮತ್ತು ಬಹುರಾಜ್ಯ ಸಹಕಾರಿ ಬ್ಯಾಂಕುಗಳಿಗೆ ಲೈಸೆನ್ಸ್ ಕೊಡುವ ಅಧಿಕಾರವನ್ನು ಕೂಡ ಆರ್ಬಿಐ ಗೆ ವಹಿಸಬೇಕು ಎಂದು ಬೆಳಗವಿ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬಲವಾಗಿ ಪ್ರತಿಪಾದಿಸಿದರು.