"ನಾನು ಮಾತು ಕೊಟ್ಟಿದ್ದೇನೆ, ರಮೇಶ್ ಕತ್ತಿಯೇ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ''
ಬೆಳಗಾವಿ, ನವೆಂಬರ್ 12: ಇದೇ ನ.14 ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ವಿಚಾರವಾಗಿ ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶವಿದ್ದು, ಅವರನ್ನು ಅಧ್ಯಕ್ಷ ಮಾಡಬೇಕು ಎಂದು ಮೊದಲಿನಿಂದಲೂ ನಾನು ಮಾತು ಕೊಟ್ಟಿದ್ದೇನೆಂದರು.
ಬೆಳಗಾವಿ: ಅಂಜಲಿ ನಿಂಬಾಳ್ಕರ್ ವಿರುದ್ಧ ಗೆದ್ದು ಬೀಗಿದ ಅರವಿಂದ್ ಪಾಟೀಲ್
ಶಿರಾ ಹಾಗೂ ಆರ್.ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ರಮೇಶ್ ಜಾರಕಿಹೊಳಿ, ಅದರ ಬಗ್ಗೆ ಕಮೆಂಟ್ ಮಾಡುವುದು ಬೇಡ, ದೇವರು ಒಳ್ಳೆಯದು ಮಾಡಲಿ ಎಂದರು.
ನಮ್ಮ ಪಕ್ಷ ದೇಶದೂದ್ದಕ್ಕೂ ಯಶಸ್ವಿಯಾಗಿ ಬೆಳೆಯುತ್ತಿದೆ. ಇವಿಎಂ ಸಮಸ್ಯೆ ಇದ್ದಿದ್ದರೆ ಗೋಕಾಕ್ ನಲ್ಲಿ ಮೊದಲು ನಾನು ಸೋಲುತ್ತಿದ್ದೆ.
ಕಳೆದ ಬಾರಿ ಕಾಂಗ್ರೆಸ್ ನಲ್ಲಿದ್ದಾಗ ಸೋತು ಮಾಜಿ ಶಾಸಕ ಆಗಿರುತ್ತಿದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಕ್ಯಾಬಿನೆಟ್ ಇದ್ದಿದ್ದಕ್ಕೆ ಕೆಲವು ಶಾಸಕರು ಇಲಾಖೆ ಕಾಮಗಾರಿ ಕುರಿತು ಭೇಟಿಗೆ ಬಂದಿದ್ದರು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಪರಮಾಧಿಕಾರ, ಅವರು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧನಿದ್ದೇನೆ. ಉಮೇಶ್ ಕತ್ತಿಯವರಿಗೆ ಮಂತ್ರಿ ಮಾಡಲು ಮೊದಲಿನಿಂದಲೂ ಒತ್ತಾಯ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ನನ್ನ ಮೇಲೆ ಗೌರವ ಇರುವುದಕ್ಕೆ ಕೆಲವರು ನನ್ನ ಬಳಿ ಬರುತ್ತಿದ್ದಾರೆ. ಎಲ್ಲದರಲ್ಲೂ ಎಂಟ್ರಿಯಾಗಬಾರದು ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರ ಪರವಾಗಿ ವಕಾಲತ್ತು ವಹಿಸುವುದಿಲ್ಲ ಎಂದು ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.