"ಲಖನ್ ಬೆನ್ನಿಗೆ ಚೂರಿ ಹಾಕಿದ" ಎಂದು ಮಾತಿನಲ್ಲೇ ಇರಿದ ರಮೇಶ್ ಜಾರಕಿಹೊಳಿ
ಬೆಳಗಾವಿ, ನವೆಂಬರ್ 15: ಉಪ ಚುನಾವಣೆಗೆ ಗೋಕಾಕ್ ಕಣ ಸಿದ್ಧಗೊಳ್ಳುತ್ತಿದೆ. ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಎದುರಾಳಿಯಾಗಿ ಲಖನ್ ಜಾರಕಿಹೊಳಿ ಕಾಂಗ್ರೆಸ್ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಈ ಸಮಯದಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ತಮ್ಮ ಸಹೋದರರ ಮೇಲೆ ಕಿಡಿಕಾರಿದ್ದಾರೆ. ಈ ಬಾರಿ ಲಖನ್ ಜಾರಕಿಹೊಳಿ ವಿರುದ್ಧ ಸಿಡಿದೆದ್ದಿರುವ ಅವರು, "ಸತೀಶ್ ಜಾರಕಿಹೊಳಿ ಮೊದಲಿನಿಂದಲೂ ನನ್ನ ವಿರೋಧಿಸಿಕೊಂಡು ಬಂದಿದ್ದಾನೆ, ಆದ್ರೆ ಲಖನ್ ಜಾರಕಿಹೊಳಿ ನನ್ನ ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ದಾನೆ" ಎಂದು ಮಾತಿನಲ್ಲೇ ಇರಿದಿದ್ದಾರೆ.
ಗೋಕಾಕ್ನಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳಲು ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಇಬ್ಬರೂ ಒಂದೇ ಹೆಲಿಕಾಪ್ಟರ್ನಲ್ಲಿ ಬಂದಿಳಿದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ, "15 ತಿಂಗಳ ಹಿಂದೆಯೇ ನಾನು ಬಿಜೆಪಿ ಅಭ್ಯರ್ಥಿ ಆಗಿದ್ದೆ. ಕಾನೂನು ತೊಡಗಿನಿಂದ ಬಾಯಿ ಬಿಟ್ಟಿರಲಿಲ್ಲ" ಎಂದೂ ತಿಳಿಸಿದ್ದಾರೆ.
ಲಖನ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ
ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಕುತಂತ್ರದಿಂದ ಸೋಲಿಸಬೇಕೇ ಹೊರತು ಬೇರೆ ಮಾರ್ಗದಿಂದ ಸೋಲಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ರಮೇಶ್ ಜಾರಕಿಹೊಳಿ.
ಲಖನ್ ನನ್ನ ತಮ್ಮನೇ ಅಲ್ಲ
"ಇವತ್ತಿನಿಂದ ಲಖನ್ ಜಾರಕಿಹೊಳಿ ನನ್ನ ತಮ್ಮ ಅಲ್ಲ. ನನ್ನ ತಮ್ಮ, ಬೇರೆಯವರ ಕುತಂತ್ರಕ್ಕೆ ಬಲಿಯಾಗಿ, ತೆಗ್ಗಿನಲ್ಲಿ ಬಿದ್ದಿದ್ದಾನೆ. ಸತೀಶ್ ಜಾರಕಿಹೊಳಿ ಮೇಲೆ ನನಗೆ ಸಿಟ್ಟಿಲ್ಲ, 40 ವರ್ಷದಿಂದ ನಾವು ಮಾತಾಡಲ್ಲ. ಆದರೆ ಲಖನ್ ನಡೆ ನೋವು ತರಿಸಿದೆ" ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
ದೆಹಲಿಗೆ ಹೊರಡುವ ಮುನ್ನ ಸೋದರ ಲಖನ್ ಬಗ್ಗೆ ರಮೇಶ್ ಪ್ರೀತಿಯ ಮಾತು
"ಸಿದ್ದರಾಮಯ್ಯ ನನ್ನ ಜೂನಿಯರ್"
ಮಾಜಿ ಸಿಎಂ ಸಿದ್ದರಾಮಯ್ಯ, ನನ್ನ ಮಾತು ಕೇಳದ ರಮೇಶ್ ಇನ್ನೆಂಥ ಶಿಷ್ಯ ಎಂದಿರುವುದಕ್ಕೆ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯ ನನ್ನ ಗುರುವೇ ಅಲ್ಲ, ಎಚ್.ವಿಶ್ವನಾಥ್ ನನ್ನ ಗುರು. ಮೊದಲಿಗೆ ನನಗೆ ಟಿಕೆಟ್ ಕೊಟ್ಟಿದ್ದು ಅವರೇ. ಕಾಂಗ್ರೆಸ್ ನಲ್ಲಿ ನಾನು ಸೀನಿಯರ್, ಸಿದ್ದರಾಮಯ್ಯ ನನ್ನ ಜೂನಿಯರ್. ಆರ್.ಶಂಕರ್ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ಅವರಿಗೆ ಟಿಕೆಟ್ ನೀಡಿಲ್ಲ, ಅವರನ್ನು ಮಂತ್ರಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ" ಎಂದಿದ್ದಾರೆ.
ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಅಂತಿಮ
"ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಎದುರಾಳಿಯಾಗಿ ಲಖನ್ ಜಾರಕಿಹೊಳಿ ಕಾಂಗ್ರೆಸ್ನಿಂದ ಸ್ಪರ್ಧಿಸುವುದು ಖಚಿತ. ಇಂದು ಸಂಜೆ ಅಥವಾ ನಾಳೆಯೊಳಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಲಿದೆ. ರಮೇಶ್ ಜಾರಕಿಹೊಳಿಯನ್ನು ಸೋಲಿಸಬೇಕೆಂದು ಮೊದಲಿನಿಂದಲೂ ಪ್ರಚಾರ ಮಾಡಲಾಗುತ್ತಿದೆ. ಗೋಕಾಕ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ" ಎಂದು ತಿಳಿಸಿದ್ದಾರೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ.