ರಾಜೀನಾಮೆಯ ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ
Recommended Video
ಬೆಳಗಾವಿ, ಫೆಬ್ರವರಿ 22: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟವನ್ನು ಸೇರಿದ ತಿಂಗಳಿನಲ್ಲಿಯೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಆಘಾತ ನೀಡಿದ್ದಾರೆ. ಈಗಲೇ ಅವರು ರಾಜೀನಾಮೆಯ ಮಾತುಗಳನ್ನಾಡಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಆಪ್ತರಾದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ತ್ಯಾಗದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಅವರಿಗೆ ಅನ್ಯಾಯವಾಗಿದೆ ಎಂದಾದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
'ಎಂಎಸ್ಐಎಲ್ ಬೇಡ, ಲ್ಯಾಂಡ್ ಆರ್ಮಿ ಬೇಕು'
ಉಪ ಚುನಾವಣೆಯಲ್ಲಿ ಜಯಗಳಿಸಿದ್ದರೂ ಮಹೇಶ್ ಕುಮಟಳ್ಳಿ ಅವರಿಗೆ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಿಜೆಪಿಗೆ ಬಂದು ಉಪ ಚುನಾವಣೆಯಲ್ಲಿ ಜಯಗಳಿಸಿದ ಉಳಿದ ಎಲ್ಲ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ದೊರೆತಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತರಾದ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಕುಮಟಳ್ಳಿ ಹೇಳಿದರೆ ರಾಜೀನಾಮೆ
ಮಹೇಶ್ ಕುಮಟಳ್ಳಿ ಅವರಿಗೆ ಅನ್ಯಾಯವಾಗಲು ತಾವು ಬಿಡುವುದಿಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರಕ್ಕೆ ಅವರು ಎಚ್ಚರಿಕೆ ರವಾನಿಸಿದ್ದಾರೆ. ಭವಿಷ್ಯದಲ್ಲಿ ಕುಮಟಳ್ಳಿಗೆ ಸಂಪುಟದಲ್ಲಿ ಸ್ಥಾನ ನೀಡಬಹುದು. ಕುಮಟಳ್ಳಿ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ. ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ನೇಹಿತನಿಗಾಗಿ ಸಚಿವ ಸ್ಥಾನ ತ್ಯಾಗದ ಮಾತನ್ನಾಡಿದ್ದಾರೆ.
ಖಾತೆ ನಿಭಾಯಿಸಿ ತೋರಿಸಬೇಕಿದೆ
ಜಲಸಂಪನ್ಮೂಲ ಇಲಾಖೆ ದೊಡ್ಡ ಇಲಾಖೆ. ನನಗೆ ಸವಾಲಿನದ್ದಾಗಿದೆ. ಇಲಾಖೆಯ ವ್ಯಾಪ್ತಿ. ದೊಡ್ಡದಿದೆ. ಅದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕಿದೆ. ನನಗೆ ಜಲಸಂಪನ್ಮೂಲ ಖಾತೆ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ವಿರೋಧಿಗಳು ಹೇಳಿದ್ದರು. ಇದಕ್ಕೆ ಸವಾಲಾಗಿ ಜಸಂಪನ್ಮೂಲ ಖಾತೆ ನಿಭಾಯಿಸಿ ತೋರಿಸಬೇಕು ಎಂದಿರುವ ರಮೇಶ್ ಜಾರಕಿಹೊಳಿ, ಸಂಪುಟದಲ್ಲಿ ಸಚಿವರ ಸ್ಥಾನಗಳು ಬದಲಾಗುವುದಿಲ್ಲ, ಇದ್ದವರನ್ನೇ ಮುಂದುವರಿಸುತ್ತಾರೆ ಎಂದಿದ್ದಾರೆ.
ಹಿಡಿದ ಪಟ್ಟು ಬಿಡದ ಸಾಹುಕಾರ: ರಮೇಶ್ ಜಾರಕಿಹೊಳಿಗೆ ಮತ್ತೊಂದು ಮೇಲುಗೈ
ಸಾಕಷ್ಟು ಅಧ್ಯಯನ ಮಾಡಬೇಕಿದೆ
ಮಹದಾಯಿ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಗೋವಾ ಮುಖ್ಯಮಂತ್ರಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾದರೆ ಹೋಗಲಿ. ನಮಗೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಕಾವೇರಿ ನ್ಯಾಯಮಂಡಳಿ ಒಂದು ಹಂತಕ್ಕೆ ಬಂದಿದೆ. ಇನ್ನು ಕೃಷ್ಣ, ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಬೇಕಿದೆ. ಬಳಿಕವೇ ಪ್ರತಿಕ್ರಿಯೆ ನೀಡುತ್ತೇನೆ.
ಕೇಂದ್ರ ಸಚಿವರ ಭೇಟಿಗೆ ದೆಹಲಿಗೆ
ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಭೇಟಿಗೆ ಸಮಯ ನೀಡಿದ್ದಾರೆ. ಹೀಗಾಗಿ ಫೆ. 25ರಂದು ದೆಹಲಿಗೆ ತೆರಳಲಿದ್ದು, ಕೇಂದ್ರ ಸಚಿವರೊಂದಿಗೆ ಮಹದಾಯಿ ವಿಚಾರದ ಕುರಿತು ಚರ್ಚೆ ನಡೆಸಲಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ನನಗೆ ಅನ್ಯಾಯವಾಗಿಲ್ಲ
ಸಚಿವ ಸ್ಥಾನ ಸಿಗದೆ ಇರುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ. ನನಗೆ ಅನ್ಯಾಯವಾಗಿಲ್ಲ. ಯಾವುದೇ ಅಸಮಾಧಾನವಿಲ್ಲ. ಮುಂದಿನ ದಿನಗಳಲ್ಲಿ ಸಮಯ ಬಂದಾಗ ಸಚಿವ ಸ್ಥಾನ ಕೊಡುತ್ತಾರೆ. ಆಗ ಅದರ ಕೆಲಸ ಮಾಡುತ್ತೇನೆ. ಈಗ ಶಾಸಕನಾಗಿ ಅವಕಾಶ ನೀಡಿದ್ದಾರೆ. ಬಿಜೆಪಿ ಅವಕಾಶ ನೀಡಿದರೆ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ.
ಜೀವನದಲ್ಲಿ ಹಣ ಗಳಿಸಬಹುದು. ಆದರೆ ವಿಶ್ವಾಸ ಗಳಿಸುವುದು ಕಷ್ಟ. ನಾನು ಅದನ್ನು ಪಡೆದಿದ್ದೇನೆ. ಅದೇ ನನ್ನ ಭಾಗ್ಯ ಎಂದು ಕುಮಟಳ್ಳಿ ಪ್ರತಿಕ್ರಿಯಿಸಿದ್ದಾರೆ.