"ಸಿದ್ದರಾಮಯ್ಯ ಸೊಕ್ಕು, ಡಿಕೆಶಿ ಭ್ರಷ್ಟಾಚಾರದಿಂದಲೇ ಬಿಜೆಪಿ ಸೇರಿದೆ": ರಮೇಶ್ ಜಾರಕಿಹೊಳಿ
Recommended Video
ಬೆಳಗಾವಿ, ನವೆಂಬರ್ 15: ಉಪ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಚುನಾವಣಾ ಕಾವು ರಂಗೇರುತ್ತಿದೆ. ಉಪ ಚುನಾವಣಾಯಲ್ಲಿ ಮತ್ತೆ ಜಾರಕಿಹೊಳಿ ಸಹೋದರರ ಸವಾಲ್ ತಾರಕಕ್ಕೇರಿದೆ. ಗೋಕಾಕ, ಕಾಗವಾಡ ಮತ್ತು ಅಥಣಿ ಕ್ಷೇತ್ರದಲ್ಲಿ ಉಪ ಚುನಾವಣಾ ಸಮರ ಶುರುವಾಗಿದೆ.
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಕಾಂಗ್ರೆಸ್ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರಿದ ಬಳಿಕ ಮೊದಲ ಬಾರಿಗೆ ಮೂವರು ಅನರ್ಹ ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ಸೇರಿದ ಬಳಿಕ ಮೊದಲ ಬಾರಿಗೆ ಗೋಕಾಕ ಕ್ಷೇತ್ರಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ಬೃಹತ್ ಸಮಾವೇಶದ ಮೂಲಕ ರಣಕಹಳೆ ಮೊಳಗಿಸಿದ್ದಾರೆ.
ಕಾಂಗ್ರೆಸ್ ಬಿಡಲು ಕಾರಣ ಬಿಚ್ಚಿಟ್ಟ ರಮೇಶ್
ಗೋಕಾಕ್ ನಾಕಾದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತದಿಂದ ಗ್ರಾಮ ದೇವತೆ ಲಕ್ಷ್ಮೀ ದೇವಸ್ಥಾನದವರೆಗೆ ರಮೇಶ್ ಜಾರಕಿಹೊಳಿ ಅಭಿಮಾನಿಗಳು ಮೆರವಣಿಗೆ ಮಾಡಿ ಎರಡು ಕ್ವಿಟಾಂಲ್ ತೂಕದ ಸೇಬಿನ ಹಾರವನ್ನು ಹಾಕಿದರು. ಈ ಸಂದರ್ಭ ಮಾತನಾಡಿದ ರಮೇಶ ಜಾರಕಿಹೊಳಿ, "ಕಾಂಗ್ರೆಸ್ ಪಕ್ಷದ ದುರಹಂಕಾರ, ಸೊಕ್ಕಿನಿಂದ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಬಿಜೆಪಿಯಿಂದ ಸರ್ಕಾರ ಬಿದ್ದಿಲ್ಲ. ಸಿದ್ದರಾಮಯ್ಯನ ಕೊಬ್ಬು, ಡಿಕೆಶಿ ಭ್ರಷ್ಟಾಚಾರದಿಂದ ಸರ್ಕಾರ ಬಿದ್ದಿದೆ. ನನ್ನ ವಿರೋಧಿಗಳು ಹೋರಾಟಗಾರರಲ್ಲ, ಕುತಂತ್ರಿಗಳು" ಎಂದು ಕುಟುಕಿದ್ದಾರೆ.
"ಲಖನ್ ಬೆನ್ನಿಗೆ ಚೂರಿ ಹಾಕಿದ" ಎಂದು ಮಾತಿನಲ್ಲೇ ಇರಿದ ರಮೇಶ್ ಜಾರಕಿಹೊಳಿ
"ನಾನೆಂದೂ ಚಮಚಾಗಿರಿ ಮಾಡಿಲ್ಲ"
"ಬಿಡದಿ ರೆಸಾರ್ಟ್ ನಲ್ಲಿ ಡಿಕೆ ಶಿವಕುಮಾರ್ ಕಾರಬಾರು ನೋಡಿದೆ. ಆಗಲೇ ಸರ್ಕಾರ ಬೀಳಿಸುವ ನಿರ್ಧಾರ ಮಾಡಿದೆ. ನಾನೆಂದೂ ಚಮಚಾಗಿರಿ ಮಾಡಿಲ್ಲ. ಮಂತ್ರಿ ಸ್ಥಾನಕ್ಕಾಗಿ ಯಾರ ಮನೆಗೂ ಹೋಗಿಲ್ಲ. ಅಸಲಿಯಾಗಿ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಮಧ್ಯೆ ಜಗಳ ಬಂತು. ಆಗ ನನ್ನನ್ನು ಸಿದ್ದರಾಮಯ್ಯ ಮಂತ್ರಿ ಮಾಡಿದರು. ಮೂರು ತಿಂಗಳಲ್ಲಿ ಜಾರಕಿಹೊಳಿ ಕುಟುಂಬ ಮುಗಿಸಬೇಕೆಂದು ಹುನ್ನಾರ ಮಾಡಿದ್ದರು ಅವರು. ಹಿಂದುಳಿದ ವರ್ಗದ ನಾಯಕರು ಬೆಳೆಯಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶ" ಎಂದು ಆಕ್ರೋಶಗೊಂಡರು.
ಸಿದ್ದರಾಮಯ್ಯ ನಂಬಿದ್ದೇ ತಪ್ಪಾಯ್ತು ಎಂದ ರಮೇಶ್
ಕಳೆದ ವಿಧಾನಸಭೆ ಚುನಾವಣೆ ಮುಗಿದ ಬಳಿಕ ನಾವೆಲ್ಲ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ನಮಗಿಂತ ಮೊದಲು ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್ ಹೋಗಿದ್ದರು. ಆಗಲೇ ನನ್ನ ವಿರುದ್ಧ ಕುತಂತ್ರ ನಡೆದಿತ್ತು. ಸಿದ್ದರಾಮಯ್ಯ ನಂಬಿ ರಾಜಕೀಯ ಮಾಡಿದ್ವಿ. ಅದೇ ತಪ್ಪಾಯಿತು ಎಂದು ಹೇಳಿಕೊಂಡಿದ್ದಾರೆ.
ಸಿದ್ಧರಾಮಯ್ಯ ನನ್ನ ಜ್ಯೂನಿಯರ್: ರಮೇಶ್ ಜಾರಕಿಹೊಳಿ
ಯಡಿಯೂರಪ್ಪ ಸಿಎಂ ಆದರೆ ಬಿಜೆಪಿಗೆ ಎಂಬ ಷರತ್ತು
"ಗೋಕಾಕ ಲಕ್ಷ್ಮಿ ದೇವರ ಆಣೆ ಮಾಡಿ ಹೇಳ್ತೀನಿ... ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದರೆ ನಾವು ಬಿಜೆಪಿಗೆ ಬರ್ತೀವಿ ಎಂದು ಅಮಿತ್ ಶಾ ಅವರಿಗೆ ಷರತ್ತು ಹಾಕಿದೆವು. ಅವರೂ ಒಪ್ಪಿದರು. ತೇಲಲಿ, ಮುಳುಗಲಿ ನಿಮ್ಮನ್ನು ಬಿಡಲ್ಲ ಎಂದು ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. 2008ರ ಚುನಾವಣೆಯ ಸನ್ನಿವೇಶ ಮತ್ತೆ ನಿರ್ಮಾಣವಾಗಿದೆ. ಆಗ ನಾನು ವೀಕ್ ಇದ್ದೆ, ಈಗಿನ ಚಿತ್ರಣ ಬೇರೆ ಇದೆ" ಎಂದು ಹೇಳಿದ್ದಾರೆ.