ರಮೇಶ್ ಜಾರಕಿಹೊಳಿ ಏಕಾಂಗಿ: ಆಪರೇಷನ್ ಕಮಲ ಠುಸ್ಸ್?
Recommended Video
ಬೆಳಗಾವಿ, ಏಪ್ರಿಲ್ 26: ಮೂರು ದಿನದ ಹಿಂದಷ್ಟೆ (ಏಪ್ರಿಲ್ 23) ಕಾಂಗ್ರೆಸ್ಗೆ ರಾಜೀನಾಮೆ ನೀಡಿಯೇ ಸಿದ್ಧ ಎಂದು ಅಬ್ಬರಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ ಆ ನಂತರ ಏಕೋ ತಣ್ಣಗಾಗಿಬಿಟ್ಟಿದ್ದಾರೆ.
ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದ ರಮೇಶ್ ಜಾರಕಿಹೊಳಿ ಆ ನಂತರ ತಮ್ಮ ಹೇಳಿಕೆ ಬದಲಿಸಿ, ಈ ಬಗ್ಗೆ ಯೋಚಿಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದರು.
ರಮೇಶ್ ಜಾರಕಿಹೊಳಿ ಅವರ ಈ ನಿರ್ಧಾರ ಪಲ್ಲಟಕ್ಕೆ ಅವರು ನಂಬಿದ್ದ ಬೆಂಬಲಿಗರೇ ಕಾರಣ ಎನ್ನಲಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರ ಜೊತೆಗಿದ್ದ ಶಾಸಕರು ರಮೇಶ್ ಜೊತೆ ಕಾಂಗ್ರೆಸ್ನಿಂದ ಹೊರಬರಲು ಒಪ್ಪದ ಕಾರಣ ರಮೇಶ್ ಅವರು ರಾಜೀನಾಮೆಯ ಧೈರ್ಯ ತೋರಲು ಮೀನಾ-ಮೇಷ ಎಣಿಸುತ್ತಿದ್ದಾರೆ.
ಸರ್ಕಾರ ಉರುಳಿಸುವ ಮ್ಯಾಜಿಕ್ ನಂಬರ್ ರಮೇಶ್ ಜಾರಕಿಹೊಳಿ ಬಳಿ ಇಲ್ಲ!
ರಮೇಶ್ ಅವರ ಜೊತೆಗೆ ಇದ್ದ ಶಾಸಕ ನಾಗೇಂದ್ರ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಅವರುಗಳು ಈಗ ಬೆನ್ನು ತೋರಿಸಿದ್ದಾರೆ ಎನ್ನಲಾಗಿದ್ದು, ರಮೇಶ್ ಅವರ ಜೊತೆ ಹೊರಗೆ ಬರಲು ಅವರು ಒಪ್ಪಿಗೆ ಇಲ್ಲದ ಕಾರಣ ರಮೇಶ್ ಜಾರಕಿಹೊಳಿ ಏಕಾಂಗಿಯಾಗಿದ್ದಾರೆ ಎನ್ನಲಾಗಿದೆ.
ಲಖನ್ ಜಾರಕಿಹೊಳಿ ಸಹ ಉಲ್ಟಾ ಹೊಡೆದರು
ಲಖನ್ ಜಾರಕಿಹೊಳಿ ಅವರೂ ರಮೇಶ್ ಬದಲಿಗೆ ಸತೀಶ್ ಜಾರಕಿಹೊಳಿ ಬಣ ಸೇರಿದ್ದು ರಮೇಶ್ ಅವರಿಗೆ ಹಿನ್ನಡೆ ತಂದಿದೆ, ಲಖನ್ ಅವರು ಸಹ ಕಾಂಗ್ರೆಸ್ ಬಿಡುವುದಿಲ್ಲ, ಬದಲಾಗಿ ರಮೇಶ್ ಅವರನ್ನು ಮನವೊಲಿಸುತ್ತೇವೆ ಎಂದಿದ್ದಾರೆ.
ರಾಜೀನಾಮೆ ಬಗ್ಗೆ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದೇನು?
ರಮೇಶ್ ಯೋಜನೆ ತಲೆಕೆಳಗು
ಕಾಂಗ್ರೆಸ್ ನಿಂದ ಉಚ್ಛಾಟಿತವಾಗಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರೂ ಸಹ ಕಾಂಗ್ರೆಸ್ಗೆ ವಿರುದ್ಧವಾಗಿ ಹೋಗಲು ನಿರಾಕರಿಸಿದ್ದಾರೆ. ರಮೇಶ್ ಅವರನ್ನು ಕಾಂಗ್ರೆಸ್ನಲ್ಲಿಯೇ ಉಳಿಸಿಕೊಳ್ಳಲಿದ್ದೇವೆ ಎಂದು ಇಂದಷ್ಟೆ ಅವರು ಹೇಳಿದ್ದಾರೆ. ಕನಿಷ್ಟ 4-5 ಬೆಂಬಲಿಗ ಶಾಸಕರೊಂದಿಗೆ ಪಕ್ಷ ಬಿಡಲು ಯೋಜಿಸಿದ್ದ ರಮೇಶ್ ಅವರಿಗೆ ಈ ಎಲ್ಲ ಬೆಳವಣಿಗೆಗಳು ತೀವ್ರ ಹಿನ್ನಡೆ ತಂದಿವೆ.
ಮೇ 23ರ ಫಲಿತಾಂಶಕ್ಕೆ ಕಾಯುತ್ತಿದ್ದಾರಾ ರಮೇಶ್?
ಮತ್ತೊಂದು ಮೂಲದ ಪ್ರಕಾರ ರಮೇಶ್ ಜಾರಕಿಹೊಳಿ ಅವರು ಮೇ 23 ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಮೇ 23ರ ಫಲಿತಾಂಶ ಬಿಜೆಪಿ ಪರವಾಗಿ ಬಂದರೆ ಆಗ ತಮ್ಮ ಬೆಂಬಲಿಗರನ್ನು ಒಲಿಸಿ ಜೊತೆಗೆ ಕರೆದುಕೊಂಡು ಕಾಂಗ್ರೆಸ್ನಿಂದ ಹೊರನಡೆಯುವುದು ಅವರಿಗೆ ಸುಲಭವಾಗಲಿದೆ ಇದೇ ಲೆಕ್ಕಾಚಾರದಲ್ಲಿ ರಮೇಶ್ ಅವರು ಇರುವ ಸಾಧ್ಯತೆಯೂ ಹೆಚ್ಚಿದೆ.
ಕ್ಷೀಣಿಸುತ್ತಿದೆಯಾ ಜಾರಕಿಹೊಳಿ ಬಲ?
ಸಹೋದರ ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಹಾಗೂ ಇನ್ನೂ ಕೆಲವು ಪ್ರಮುಖ ಕಾಂಗ್ರೆಸ್ ಮುಖಂಡರಿಂದ ತೀವ್ರ ರಾಜಕೀಯ ಪ್ರತಿರೋಧವನ್ನು ರಮೇಶ್ ಜಾರಕಿಹೊಳಿ ಎದುರಿಸುತ್ತಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅವರ ಬಲ ಕ್ಷೀಣಿಸಿದಂತೆ ಮೇಲ್ನೋಟಕ್ಕೆ ಗೋಚರವಾಗುತ್ತಿದೆ.