ಬೆಳಗಾವಿ ಡಿಸಿಸಿ ಬ್ಯಾಂಕ್ಗೆ ಮಹೇಶ್ ಕುಮಟಳ್ಳಿ ಅಧ್ಯಕ್ಷರಾಗುತ್ತಾರಾ?
ಬೆಳಗಾವಿ, ಫೆಬ್ರವರಿ 22: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಬದಲಾವಣೆಗೆ ಒಂದು ಪ್ರಮುಖ ಕಾರಣ ಎನ್ನಲಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಸಾರಿಯ ಬ್ಯಾಂಕ್ನ ಅಧ್ಯಕ್ಷ ಉಪಾದ್ಯಕ್ಷ ಚುನಾವಣೆ ಮತ್ತೆ ಬಂದಿದ್ದು, ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈ ಬಗ್ಗೆ ಮಾತನಾಡಿದ್ದಾರೆ. "ನಾನು, ನನ್ನ ಸಹೋದರ ಬಾಲಚಂದ್ರ, ಕತ್ತಿ ಬ್ರದರ್ಸ್ ಒಟ್ಟಾಗಿಯೇ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮಾಡುತ್ತೇವೆ. ಜಾರಕಿಹೊಳಿ ಮತ್ತು ಕತ್ತಿ ಬ್ರದರ್ಸ್ ಮೊದಲಿನಿಂದ ಕೂಡಿಯೇ ಇದ್ದೇವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಹೇಶ ಕುಮಟಳ್ಳಿ ನೇಮಕ ಮಾಡಲು ಪ್ರಯತ್ನಿಸುತ್ತಿಲ್ಲ' ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆದರೆ ಸಚಿವ ಸ್ಥಾನ ಸಿಗದ ಕುಮಟಳ್ಳಿ ಅವರಿಗೆ ಸದ್ಯ ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂಬ ಮಾತು ಬೆಳಗಾವಿ ರಾಜಕೀಯ ಪಡಸಾಲೆಯಲ್ಲಿ ಹರಡಿದೆ.
ಹಿಡಿದ ಪಟ್ಟು ಬಿಡದ ಸಾಹುಕಾರ: ರಮೇಶ್ ಜಾರಕಿಹೊಳಿಗೆ ಮತ್ತೊಂದು ಮೇಲುಗೈ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ್ ಕತ್ತಿ ನಾವೆಲ್ಲಾ ಒಂದೇ. ರಮೇಶ್ ಕತ್ತಿ ಮತ್ತು ನಾವು ಕೂಡಿ ಎಲೆಕ್ಷನ್ ಮಾಡುತ್ತೇವೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷ ಬರಲ್ಲ, ಸಂಘಗಳು ಇರುತ್ತವೆ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳಕರ್ಗೆ ಟಾಂಗ್ ಕೊಟ್ಟಿದ್ದಾರೆ.
ಅಧ್ಯಕ್ಷ ಬದಲಾವಣೆ ಮಾಡೋದಾದರೆ ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ ನಿರ್ಧಾರ ತಗೋತಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಾನು ಕೈ ಹಾಕಲ್ಲ. ಡಿಸಿಎಂ ಲಕ್ಷ್ಮಣ ಇನ್ನೊಂದು ಬಣದಲ್ಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.