ಮಾಧ್ಯಮದವರ ಮೇಲೆ ಹರಿಹಾಯ್ದ ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ, ಡಿಸೆಂಬರ್ 22: ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಶುಗರ್ಸ್ ಸಕ್ಕರೆ ಕಾರ್ಖಾನೆಯು ರೈತರಿಗೆ ಕಬ್ಬಿನ ಬಾಕಿ ಬಿಲ್ ಪಾವತಿಸದೇ ಇರುವ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ.
ಬಾಕಿ ಹಣ ನೀಡುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ
ಬೆಳಗಾವಿಯ ಯಮಕನಮರಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಮಾಧ್ಯಮದವರು ರಮೇಶ್ ಜಾರಕಿಹೊಳಿ ಅವರನ್ನು ಸುತ್ತುವರೆದು ರೈತರಿಗೆ ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆಯಿಂದ ರೈತರ ಬಿಲ್ ಬಾಕಿ ಇರುವ ಬಗ್ಗೆ ಪ್ರಶ್ನೆ ಕೇಳಿದರು.
ಮಾಧ್ಯಮದವರ ಪ್ರಶ್ನೆಗಳಿಂದ ಕೆರಳಿದ ರಮೇಶ್ ಜಾರಕಿಹೊಳಿ ನಮ್ಮ ಕಾರ್ಖಾನೆಯದ್ದಷ್ಟೆ ಅಲ್ಲ ಜಿಲ್ಲೆಯ 7-8 ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿವೆ ಆದರೆ ನೀವು ನನ್ನ ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆಯನ್ನು ಮಾತ್ರ ಹೈಲೆಟ್ ಮಾಡಿ ತೋರಿಸುತ್ತಿದ್ದೀರಿ ಎಂದು ಜೋರು ಧನಿಯಲ್ಲಿ ಹೇಳಿದರು.
ರೈತರಿಗೆ ತೊಂದರೆ ಕೊಡಬೇಕು ಎನ್ನುವ ಉದ್ದೇಶ ನಾವು ಹೊಂದಿಲ್ಲ. ನಮ್ಮ ಫ್ಯಾಕ್ಟರಿಗಳು ಸ್ವಲ್ಪ ನಷ್ಟದಲ್ಲಿವೆ ರೈತರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ ಎಂದು ಹೇಳಿದರು.
ಕಳೆದ ಒಂದೂವರೆ ವರ್ಷಗಳಿಂದ ನಾನು ಆ ಸೌಭಾಗ್ಯ ಲಕ್ಷ್ಮೀ ಶುಗರ್ ಫ್ಯಾಕ್ಟರಿಯ ಚೇರ್ಮನ್ ಅಲ್ಲ. ಡಳಿತ ಮಂಡಳಿ ಜೊತೆ ಮಾತನಾಡಿ ಆದಷ್ಟು ಬೇಗ ಬಿಲ್ಲ ಕೊಡುವ ವ್ಯವಸ್ಥೆ ಮಾಡುತ್ತೆನೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆಯು ಕಬ್ಬು ಬಿಲ್ ಪಾವತಿಸಬೇಕೆಂದು ಒತ್ತಾಯಿಸಿ ಕೆಲವು ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ, ಪ್ರತಿಭಟನಾ ನಿರತ ರೈತ ಮುಖಂಡರನ್ನು ಮುಖ್ಯಮಂತ್ರಿಗಳು ಭೇಟಿ ಆಗಿ ಮನವಿಯನ್ನೂ ಸ್ವೀಕರಿಸಿದ್ದಾರೆ.