"ಖಾಲಿ ಕೈ ಸಾಹುಕಾರ ರಮೇಶ್ ಜಾರಕಿಹೊಳಿಗೆ ಎಂಥ ಐಟಿ ಭಯ?"
ಬೆಳಗಾವಿ, ಸೆಪ್ಟೆಂಬರ್ 20: "ರಮೇಶ ಜಾರಕಿಹೊಳಿಗೆ ಯಾವುದೇ ಭಯವಿಲ್ಲ. ಅವರು ಖಾಲಿ ಕೈಯಲ್ಲಿ ಇದ್ದಾರೆ. ನಾನು ಸಾಲಗಾರ ಎಂದು ಗೋಕಾಕ್ ಸಮಾವೇಶದಲ್ಲಿ ಹೇಳಿದ್ದಾರೆ. ಅವರ ಆಸ್ತಿಯನ್ನು ಅಳಿಯ ಅಂಬಿರಾವ್ ತೆಗೆದುಕೊಂಡು ಹೋಗಿದ್ದಾರೆ" ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ಶುಕ್ರವಾರ ಹೇಳಿದರು.
ಗೋಕಾಕ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಮೇಶ ಜಾರಕಿಹೊಳಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾಗಲಿ. ಆ ನಂತರ ಗೋಕಾಕ್ ನಲ್ಲಿ ಬೃಹತ್ ಸಭೆ ಮಾಡುತ್ತೇವೆ. ಗೋಕಾಕದಲ್ಲಿ ಬೃಹತ್ ಸಮಾವೇಶ ನಡೆಸಲು ಪ್ಲಾನ್ ಮಾಡಲಾಗಿದೆ. ಆದರೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲ ಎಂದು ಬೆಳಗಾವಿಯಲ್ಲಿ ಹೇಳಿದರು.
ಎರಡು ವಸ್ತು ಕಳೆದುಕೊಂಡ ರಮೇಶ ಜಾರಕಿಹೊಳಿ; ಮೊದಲನೆಯದು ಯಾವುದು?
ರಮೇಶ ಜಾರಕಿಹೊಳಿ ಡಿಸಿಎಂ ಮತ್ತು ನೀರಾವರಿ ಮಂತ್ರಿಯಾಗಿ, ಉಸ್ತುವಾರಿ ಸಚಿವರಾಗಿ ಗೋಕಾಕಕ್ಕೆ ಬಂದ ನಂತರ ಕಾಂಗ್ರೆಸ್ ನಿಂದ ಬೃಹತ್ ಸಮಾವೇಶ ಮಾಡಲಾಗುತ್ತದೆ. ಆಗ ಬೃಹತ್ ಸಮಾವೇಶ ಮಾಡಿದರೆ ಅರ್ಥ ಇರುತ್ತದೆ ಎಂದು ಹೇಳಿದ ಸತೀಶ ಜಾರಕಿಹೊಳಿ, ರಮೇಶ ಕಳೆದುಕೊಂಡ ವಸ್ತು ಯಾವುದು ಎಂಬ ಬಗ್ಗೆ ಅಲ್ಲೇ ಹೇಳ್ತೀನಿ ಎಂದು ಕಾಲೆಳೆದರು.
ರಮೇಶ್ ಕಳೆದುಕೊಂಡ ವಸ್ತುವಿನ ವಿಚಾರ ಬಹಿರಂಗ
ಆದಾಯ ತೆರಿಗೆ ಇಲಾಖೆಗೆ ಹೆದರಿ ರಮೇಶ ಜಾರಕಿಹೊಳಿ ಬಿಜೆಪಿಗೆ ಹೋಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಮೇಶ ಜಾರಕಿಹೊಳಿಗೆ ಯಾವುದೇ ಭಯವಿಲ್ಲ. ಅವರು ಖಾಲಿ ಕೈಯಲ್ಲಿ ಇದ್ದಾರೆ. ರಮೇಶನ ಆಸ್ತಿ ಅಳಿಯನ ಹೆಸರಿಗೆ ಆಗಿದೆ. "ನಾನು ಸಾಲಗಾರ" ಎಂದು ಗೋಕಾಕ್ ಸಮಾವೇಶದಲ್ಲಿ ಹೇಳಿದ್ದಾರೆ. ಅವರ ಆಸ್ತಿಯನ್ನು ಅಳಿಯ ಅಂಬಿರಾವ್ ತೆಗೆದುಕೊಂಡು ಹೋಗಿದ್ದಾರೆ. ಆದ್ದರಿಂದಲೇ ತಾನು ಸಾಲಗಾರ ಎಂದು ಹೇಳಿದ್ದಾನೆ. ರಮೇಶ ಜಾರಕಿಹೊಳಿ ಡಿಸಿಎಂ, ಜಲಸಂಪನ್ಮೂಲ ಸಚಿವರಾಗಲಿ. ಆ ನಂತರ ಗೋಕಾಕ್ ನಲ್ಲಿ ಬೃಹತ್ ಸಭೆ ಮಾಡುತ್ತೇವೆ. ಆಗ ರಮೇಶ ಜಾರಕಿಹೊಳಿ ವಸ್ತು ಕಳೆದುಕೊಂಡ ವಿಚಾರದ ಬಗ್ಗೆ ಸಭೆಯಲ್ಲಿ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ ಸತೀಶ್. ಈ ಹಿಂದೆ ಎರಡು ವಸ್ತುಗಳನ್ನು ಕಳೆದುಕೊಂಡಿದ್ದ ರಮೇಶ್ ಬಗ್ಗೆ ಹೇಳುತ್ತಾ, ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎಂದಷ್ಟೇ ಹೇಳಿದ್ದರು. ಕಳೆದುಕೊಂಡ ಎರಡನೇ ವಸ್ತು ಬಗ್ಗೆ ತಿಳಿಸಿರಲಿಲ್ಲ. ಇದೀಗ ಮುಂದೆ ಗೋಕಾಕ್ ನಲ್ಲಿ ನಡೆಸುವ ಸಭೆಯಲ್ಲಿ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.
ಎಂಥ ವಿಚಾರಣೆ ಎದುರಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥರು
ಡಿ. ಕೆ. ಶಿವಕುಮಾರ್ ಇ.ಡಿ. ಬಂಧನದಲ್ಲಿ ಇರುವಾಗಲೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಮನ್ಸ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ವಿಚಾರವನ್ನು ಎದುರಿಸಲು ಅವರು ಸಮರ್ಥರು. ಯಾರ ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಬೇಕು. ಆದರೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂಥದ್ದನ್ನು ಎದುರಿಸುವುದಕ್ಕೆ ಸಮರ್ಥರಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇನ್ನು ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ನಾನು ಯಾರಿಗೆ ಹೇಳುತ್ತೇನೋ ಅವರಿಗೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯುತ್ತದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರು ಯಾರು ಆಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ. ಸೆ. 24ಕ್ಕೆ ಬೆಳಗಾವಿಯಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ಸಭೆ ನಡೆಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆಯಲ್ಲಿ ರಾಜ್ಯದ ನಾಯಕರು ಭಾಗಿ ಆಗಲಿದ್ದಾರೆ ಎಂದಿದ್ದಾರೆ.
ಕಂದಾಯ ಸಚಿವ ಅಶೋಕ್ ಒಮ್ಮೆಯೂ ಬೆಳಗಾವಿಗೆ ಬಂದಿಲ್ಲ
ನೆರೆ ಪರಿಹಾರದ ವಿಚಾರದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಯಾವುದೇ ಪ್ರಯೋಜನ ಇಲ್ಲ. ಕೇಂದ್ರದಿಂದ ಅನುದಾನ ತರುವಲ್ಲಿ ರಾಜ್ಯ ನಾಯಕರು ವಿಫಲರಾಗಿದ್ದಾರೆ. ಸಂತ್ರಸ್ತರಿಗೆ ನೀಡಿದ ಚೆಕ್ ಗಳು ಬೌನ್ಸ್ ಆಗಿವೆ. ಇನ್ನು ಎನ್ ಡಿಆರ್ ಎಫ್ ಮಾರ್ಗಸೂಚಿಗಳು ಪರಿಹಾರ ನೀಡಲು ಅಡ್ಡಿಯಾಗಿವೆ. ಶೆಡ್ ನಿರ್ಮಾಣ, ಮನೆ ನಿರ್ಮಾಣಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ನೆರೆ ನಿರ್ವಹಣೆಯಲ್ಲಿ ವಿಫಲವಾಗಿದೆ. ಇಂಥ ಸನ್ನಿವೇಶದಲ್ಲಿ ಕಂದಾಯ ಸಚಿವರು ಪಾತ್ರ ಮುಖ್ಯವಾಗಿದೆ. ಆದರೆ ಈವರೆಗೆ ಒಮ್ಮೆಯೂ ಅವರು ಬೆಳಗಾವಿಗೆ ಬಂದಿಲ್ಲ. ಕಂದಾಯ ಸಚಿವರಾದ ಆರ್. ಅಶೋಕ್ ಬೆಂಗಳೂರಿಗೆ ಮಾತ್ರ ಸಿಮೀತರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚನೆ ಕೊಟ್ಟು, ಅಶೋಕ್ ಅವರನ್ನು ಪ್ರವಾಸಕ್ಕೆ ಕಳುಹಿಸಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಪ್ರತಿಭಟನೆಗೆ ಹೆದರಿ ಅಧಿವೇಶನ ಶಿಫ್ಟ್
ಬೆಳಗಾವಿಯಲ್ಲಿ ಅಧಿವೇಶನ ಮಾಡಲು ಬಿಜೆಪಿಗೆ ಧೈರ್ಯವಿಲ್ಲ. ಆ ಕಾರಣದಿಂದಲೇ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಎಲ್ಲಿ ನೆರೆ ಸಂತ್ರಸ್ತರ ಪ್ರತಿಭಟನೆ ಎದುರಿಸಬೇಕಾಗುತ್ತದೋ ಎಂದು ಹೆದರಿ ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ನೆರೆ ಸಂತ್ರಸ್ತರ ವಿಚಾರವಾಗಿ ಸರ್ವ ಪಕ್ಷ ಸಭೆ ನಡೆಸಬೇಕು. ಬಿಜೆಪಿ ನಾಯಕರು ಪ್ರಧಾನಿ ಮೋದಿ ಮುಂದೆ ಮಾತನಾಡಲು ಹೆದರಿದ್ದಾರೆ. ನಮ್ಮನ್ನು ಕರೆದುಕೊಂಡು ಹೋದರೆ ನಾವೇ ಮಾತನಾಡುತ್ತೇವೆ ಎಂದಿದ್ದಾರೆ ಸತೀಶ ಜಾರಕಿಹೊಳಿ. ಈ ಬಾರಿ ನೆರೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಹಾನಿಯಾಗಿದೆ. ಇದರಿಂದ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡ ವರದಿಗಳು ಕೂಡ ಬಂದಿವೆ. ರಾಜ್ಯ ಸರ್ಕಾರದಿಂದ ನೆರೆ ಪರಿಹಾರಕ್ಕೆ ಸೂಕ್ತ ಕ್ರಮಗಳು ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ಮಾತನಾಡಿದ್ದಾರೆ.