ಸಹೋದರರ ಆರೋಪ-ಪ್ರತ್ಯಾರೋಪ: ಇಂದೇ ರಮೇಶ್ ಜಾರಕಿಹೊಳಿ ರಾಜೀನಾಮೆ?
Recommended Video
ಬೆಳಗಾವಿ, ಏಪ್ರಿಲ್ 24: ಬೆಳಗಾವಿ ಸಹೋದರರ ಭಿನ್ನಮತ ಮತ್ತಷ್ಟು ಉಲ್ಬಣಿಸಿದೆ. ಇಬ್ಬರೂ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಕೌಟುಂಬಿಕ ಮನಸ್ತಾಪ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಥಿತ್ಯಂತರಕ್ಕೆ ಕಾರಣವಾಗುವ ಸೂಚನೆ ನೀಡಿದೆ.
ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಪಕ್ಷ ತ್ಯಜಿಸುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಬೆಳಗಾವಿಯಿಂದ ಅವರು ಬೆಂಗಳೂರಿನತ್ತ ಹೊರಟಿದ್ದು, ಅವರೊಂದಿಗೆ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಕೂಡ ಪ್ರಯಾಣಿಸುತ್ತಿದ್ದಾರೆ. ಸಂಜೆ ವೇಳೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಸಹೋದರರ ನಡುವಿನ ವೈಮನಸ್ಸು ಸರಿಪಡಿಸಲು ಮತ್ತೊಬ್ಬ ಸಹೋದರ, ಬಿಜೆಪಿ ಮುಖಂಡ ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದರು. ಆದರೆ ಅದು ಫಲಕಂಡಿಲ್ಲ. ಇನ್ನೊಬ್ಬ ಸಹೋದರ ಲಖನ್, ಸತೀಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದಾಗಿ ರಮೇಶ್ ಮುನಿಸಿ ಮತ್ತಷ್ಟು ತೀವ್ರವಾಗಿದ್ದು, ಅವರು ಪಕ್ಷ ತ್ಯಜಿಸುವ ನಿರ್ಧಾರವನ್ನು ಬಲಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡುವ ಕುರಿತು ಸಹೋದರ ಹೇಳಿದ್ದೇನು?
ಸಂಪುಟ ವಿಸ್ತರಣೆ ಸಂದರ್ಭದಿಂದಲೂ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿಗರ ಜತೆಗೂಡಿ ರಾಜೀನಾಮೆ ನೀಡುವ ಬೆದರಿಕೆ ಇರಿಸಿದ್ದರು. ಬಳಿಕ ರಮೇಶ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಸತೀಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನಕ್ಕೆ ನೇಮಿಸಲಾಗಿತ್ತು. ಕೌಟುಂಬಿಕ ಮನಸ್ತಾಪ, ರಾಜಕೀಯಕ್ಕೂ ಬಂದಿದ್ದರಿಂದ ಸಹೋದರರು ವಿಭಿನ್ನ ಹಾದಿ ತುಳಿಯುವುದು ಸ್ಪಷ್ಟವಾಗಿತ್ತು.
ರಮೇಶ್-ಕಾರಜೋಳ ಬೆಂಗಳೂರಿಗೆ
ಕಾಂಗ್ರೆಸ್ನ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನತ್ತ ಪ್ರಯಾಣಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಅವರು ರಾಜಧಾನಿಯತ್ತ ತೆರಳುತ್ತಿದ್ದಾರೆ. ಅವರೊಂದಿಗೆ ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಕೂಡ ಬೆಂಗಳೂರಿಗೆ ಬರುತ್ತಿದ್ದಾರೆ. ರಾಜಧಾನಿಗೆ ಆಗಮಿಸಿದ ಬಳಿಕ ರಮೇಶ್ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿ ರಾಜೀನಾಮ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ
ನಾನು ಎಲ್ಲೂ ಹೋಗಿಲ್ಲ, ಕಾಂಗ್ರೆಸ್ ನಲ್ಲೇ ಇದ್ದೇನೆ: ಲಖನ್ ಜಾರಕಿಹೊಳಿ
ಅಂಬಿರಾವ್ ಕಾರಣ ಎಂದ ಸತೀಶ್
ತಮ್ಮಿಬ್ಬರ ನಡುವಿನ ಜಗಳಕ್ಕೆ ರಮೇಶ್ ಜಾರಕಿಹೊಳಿ ಅವರ ಆಪ್ತ ಅಂಬಿರಾವ್ ಕಾರಣ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಗೋಕಾಕ್ನಲ್ಲಿ ಸಚಿವರ ಮಾತನ್ನು ಅಧಿಕಾರಿಗಳು ಪಾಲಿಸುವುದಿಲ್ಲ. ಆದರೆ, ಅಂಬಿರಾವ್ ಹೇಳಿದ್ದನ್ನು ಕೇಳುತ್ತಾರೆ. ಹೀಗಾಗಿ ಈ ಭಾಗದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಂಬಿರಾವ್ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಅಂಬಿರಾವ್ ಗೋಕಾಕ್ ಬಿಡುವುದಾದರೆ ಸುಮ್ಮನಿರುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಕಾಂಗ್ರೆಸ್ನಲ್ಲಿ ಮತ್ತೆ ಭಿನ್ನಮತ ಬಹಿರಂಗ
ಕಾಲ ಮಿಂಚಿಹೋಗಿದೆ
ಈಗಾಗಲೇ ಪರಿಸ್ಥಿತಿ ಕೈಮೀರಿದೆ. ಈಗ ಬಾಲಚಂದ್ರ ಜಾರಕಿಹೊಳಿ ಮುಂದೆ ಬಂದು ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸುತ್ತೇನೆ ಎನ್ನುತ್ತಿದ್ದಾರೆ. ಈಗ ಏನೂ ಮಾಡಲು ಆಗುವುದಿಲ್ಲ. ಕೌಟುಂಬಿಕ ಜಗಳ ಹೊರಹಾಕಬಾರದು ಎಂದು ಹಲವು ದಿನಗಳಿಂದ ಸುಮ್ಮನಿದ್ದೆವು. ಅಂಬಿರಾವ್ ಗೋಕಾಕ್ ಬಿಡುವುದಾದರೆ ಷರತ್ತುಬದ್ಧ ಸಂಧಾನಕ್ಕೆ ನಾವು ತಯಾರಿದ್ದೇವೆ. ಲಖನ್ ಬೆಂಬಲಕ್ಕೆ ಬಂದ ಬಳಿಕ ನನ್ನ ಶಕ್ತಿ ಹೆಚ್ಚಾಗಿದೆ ಎಂದು ಸತೀಶ್ ಹೇಳಿದ್ದಾರೆ.
ಸತೀಶ್ ಗೋಮುಖ ವ್ಯಾಘ್ರ
ಸಹೋದರ ಸತೀಶ್ ಜಾರಕಿಹೊಳಿ ಒಬ್ಬ ಗೋಮುಖ ವ್ಯಾಘ್ರ. ಭಿನ್ನಮತ ಆರಂಭಕ್ಕೆ ಅವರೇ ಕಾರಣ. ನಾನು ಸಚಿವನಾಗಿ ಆರಾಮವಾಗಿದ್ದೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಂಡಾಯಕ್ಕೆ ಪ್ರಚೋದನೆ ನೀಡಿದ್ದೇ ಅವರು. ಸಚಿವರಿಗೆ ಆಪ್ತ ಸಹಾಯಕರು ಮುಖ್ಯವಾಗಿರುತ್ತಾರೆ. ಹೀಗಾಗಿ ಅಂಬಿರಾವ್ ಜತೆಗಿದ್ದರು. ಸತೀಶ್ ಹತಾಶೆಯಿಂದ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಯಮಕನಮರಡಿಯಿಂದ ಸ್ಪರ್ಧೆ
ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದಾಗಿ ಸೂಚನೆ ನೀಡಿರುವ ಶಾಸಕ ರಮೇಶ್ ಜಾರಕಿಹೊಳಿ ಗೋಕಾಕ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಅಣ್ಣ ಸತೀಶ್ ಜಾರಕಿಹೊಳಿ ಅವರ ವಿರುದ್ಧವೇ ಯಮಕನಮರಡಿ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಫಲಿತಾಂಶದ ಒಳಗೆ ಪತನ
ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ನಲ್ಲಿ ನಾಯಕತ್ವದ ಸಮಸ್ಯೆ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಂದ ಶಾಸಕರು ಬಿಜೆಪಿಯತ್ತ ಬರಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
20 ಅಲ್ಲ, 78 ಶಾಸಕರು
ರಮೇಶ್ ಜಾರಕಿಹೊಳಿ ಅವರನ್ನು ಪಕ್ಷ ಗೌರವದಿಂದ ನಡೆಸಿಕೊಂಡಿದೆ. ಅವರಿಗೆ ಸೂಕ್ತ ಸ್ಥಾನ ನೀಡಿದೆ. ಉಸಿರುಗಟ್ಟಿವಂತೆ ಏನಾಗಿತ್ತೋ ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ಅವರೊಂದಿಗೆ 20 ಅಲ್ಲ, 78 ಶಾಸಕರು ಇದ್ದಾರೆ. ಅವರ ಜತೆಗೆ ಅಸೆಂಬ್ಲಿಯಲ್ಲಿ ಕುಳಿತು ಮಾತನಾಡುತ್ತೇವೆ. ಬಿಜೆಪಿಯವರು ತುಂಬಾ ದಡ್ಡರಿದ್ದಾರೆ ಎಂದು ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ.